ಚಿಕ್ಕಮಗಳೂರು: ಜಿಲ್ಲೆಯ (Chikmagaluru) ಮಲೆನಾಡು ಭಾಗದ ದಟ್ಟ ಕಾನನದಲ್ಲಿ ಮತ್ತೆ ಕೆಂಪು ಉಗ್ರರ ಹೆಜ್ಜೆ ಗುರುತುಗಳು ಸದ್ದು ಮಾಡತೊಡಗಿದೆ. 2013-14ರಲ್ಲಿ ಏಳೆಂಟು ಜನ ನಕ್ಸಲರು ಶರಣಾಗತರಾದ ಮೇಲೆ ಮಲೆನಾಡಲ್ಲಿ ಬಹುತೇಕ ನಕ್ಸಲ್ ಚಟುವಟಿಕೆ ಕ್ಷೀಣಗೊಂಡಿತ್ತು. ಇದೀಗ ಮತ್ತೆ ಮಲೆನಾಡ ಕಾಡುಗಳಲ್ಲಿ ನಕ್ಸಲರ ಹೆಜ್ಜೆ ಸದ್ದು ಮಾಡುತ್ತಿದೆ.
ಕಳೆದ ವಾರ ಶೃಂಗೇರಿ (Sringeri) ತಾಲೂಕಿನ ಕಾಡಂಚಿನ ಕುಗ್ರಾಮಕ್ಕೆ ಭೇಟಿ ನೀಡಿದ್ದ ನಕ್ಸಲರ ತಂಡ ಮನೆಯೊಂದರಲ್ಲಿ ಊಟ ಮಾಡಿ, ಮಾತನಾಡಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಕೊಪ್ಪ (Koppa) ತಾಲೂಕಿನ ಮೇಗೂರು ಸಮೀಪದ ಕುಗ್ರಾಮ ಯಡಗುಂದದ ಇಬ್ಬರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಡಾಗ್ ಸ್ಕ್ವಾಡ್ ಜೊತೆ ಎಎನ್ಎಫ್ ಸಿಬ್ಬಂದಿ ಕಾಡಲ್ಲಿ ನಕ್ಸಲ್ ಹೆಜ್ಜೆ ಹುಡುಕುತ್ತಿದ್ದಾರೆ.
ವಶಕ್ಕೆ ಪಡೆಯಲಾದ ಇಬ್ಬರು ಯುವಕರು ಬೆಂಗಳೂರಿಗೆ ಕೇರಳದಿಂದ ಬಂದಿದ್ದ ಹಾರ್ಡ್ ಕೋರ್ ನಕ್ಸಲ್ ನಾಯಕಿ ಮುಂಡಗಾರು ಲತಾಳಿಗೆ ಸಂಬಂಧಪಟ್ಟ ಪತ್ರವನ್ನ ತರಲು ಹೋಗಿದ್ದರು ಎನ್ನಲಾಗಿದೆ. ಇನ್ನೂ ಶೃಂಗೇರಿ, ಕೊಪ್ಪ ಹಾಗೂ ಕಳಸ ತಾಲೂಕಿನಲ್ಲಿ ವ್ಯಾಪಿಸಿಕೊಂಡಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಎಎನ್ಎಫ್ (Anti Naxal Force) ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.