ಬೆಂಗಳೂರು: ರಥ ಸಪ್ತಮಿ ಪ್ರಯುಕ್ತ ಇದೇ ಮೊದಲ ಬಾರಿಗೆ ವಿಧಾನ ಸೌಧದ ಆವರಣದಲ್ಲಿ ಸಪ್ತ ಸಾಮೂಹಿಕ ಮತ್ತು ಸೂರ್ಯ ನಮಸ್ಕಾರವನ್ನು ಆಯೋಜನೆ ಮಾಡಲಾಗಿತ್ತು. ಪತಂಜಲಿ ಯೋಗ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಕಾರ್ಯಕ್ರಮದಲ್ಲಿ ಸಚಿವ ಸಿಟಿ ರವಿ, ಶಾಸಕ ಉದಯ್ ಗರುಡಾಚಾರ್ ಮತ್ತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉಪಸ್ಥಿತರಿದ್ದರು.
ಮುಂಜಾನೆ ಐದು ಗಂಟೆಯಿಂದಲೇ ಸಾವಿರಾರು ಜನ ಸೂರ್ಯ ನಮಸ್ಕಾರಕ್ಕಾಗಿ ವಿಧಾನಸೌಧಕ್ಕೆ ಆಗಮಿಸಿ 108 ಸೂರ್ಯ ನಮಸ್ಕಾರವನ್ನ ಮಾಡಿದ್ದಾರೆ. ಸಚಿವ ಸಿಟಿ ಅವರು ಕೂಡ ಜನ ಮಧ್ಯೆ 108 ನಮಸ್ಕಾರವನ್ನ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ಯೋಗ ಬದುಕಿನ ಭಾಗ ಆಗಬೇಕು. ಯೋಗ ಮನುಷ್ಯನ ಅಂಧಕಾರವನ್ನು ದೂರ ಮಾಡುತ್ತದೆ. ಆತ್ಮಸಂಧಾನಕ್ಕೂ ಯೋಗ ಉಪಾಯಕಾರಿ ಭಯೋತ್ಪಾದನೆ ಮೂಲಕ ಜಗತ್ತು ಗೆಲ್ಲುವ ಯೋಚನೆ ಮಾಡುತ್ತಿದ್ದಾರೆ. ಭಯೋತ್ಪಾದನೆಯಿಂದ ಕೆಲ ಸಂಸ್ಕೃತಿ ನಾಶ ಮಾಡುವ ಯತ್ನವಾಗುತ್ತಿದೆ. ಆದರೆ ಭಯೋತ್ಪಾದನೆಯಿಂದ ಜಗತ್ತು ಗೆಲ್ಲಲು ಸಾಧ್ಯವಿಲ್ಲ. ನಮ್ಮ ದೇಶ ಸಂಸ್ಕೃತಿ ಸಂಸ್ಕಾರದಿಂದ ಗೆಲ್ಲುತ್ತದೆ. ಜಗದಗಲ ಯೋಗ ಹರಡಿದೆ, ನಮ್ಮ ಪ್ರಾಚೀನ ವಿದ್ಯೆ ನಮ್ಮ ಯೋಗ ಪ್ರತಿ ಮನುಷ್ಯನಿಗೆ ಬದುಕಿನ ಉನ್ನತಿಗೆ ಕಾರಣ ಇಂತಹ ಯೋಗದಿಂದ ಜಗತ್ತಿನೆಲ್ಲೆಡೆ ತಲುಪುತ್ತಿದ್ದೇವೆ. ಪತಂಜಲಿ ಮಹರ್ಷಿ ಎಲ್ಲ ಯೋಗ ಜೋಡಿಸಿ ನಮಗೆ ಕೊಟ್ಟ ವಿದ್ಯೆ ಎಂದರು.
ಯಾವುದೇ ಪಕ್ಷವಾದರೂ ದೇಶ ಮೊದಲು ಎಂಬುದು ಬರಬೇಕು. ದುಡಿಮೆ ಇಲ್ಲದ ಹಣ, ನೀತಿ ಇಲ್ಲದ ವ್ಯಾಪಾರ, ಶೀಲವಿಲ್ಲದ ಶಿಕ್ಷಣ, ಆತ್ಮ ಸಾಕ್ಷಿಯಿಲ್ಲದ ಭೋಗ, ಮಾನವೀಯತೆ ಇಲ್ಲದ ವಿಜ್ಞಾನದ ಬಗ್ಗೆ ಗಾಂಧೀಜಿ ಹೇಳಿದ್ದರು. ಗಾಂಧೀಜಿ ವಾಕ್ಯ ಪರಿಪಾಲನೆ ಆದರೆ ಸಮಾಜದ ಅನಿಷ್ಠಗಳು ದೂರಾಗುತ್ತವೆ. ತ್ಯಾಗ ಇಲ್ಲದ ಪೂಜೆ ಬಗ್ಗೆಯೂ ಗಾಂಧೀಜಿ ಹೇಳಿದ್ದರು. ಸಪ್ತ ಘಾತಕಗಳನ್ನು ದೂರ ಮಾಡಿ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.