ಬೆಂಗಳೂರು: ಅನುದಾನ ಸಿಗ್ತಿಲ್ಲ, ಸಚಿವರು ಕಷ್ಟ ಕೇಳಲ್ಲ ಅಂತ ಕೆಲ ಕೈ (Congress) ಶಾಸಕರು ಗೋಳಾಟ. ಆದ್ರೆ ಕೆಲವು ಸಚಿವರು, ಶಾಸಕರಿಗೆ ಸಿದ್ದರಾಮಯ್ಯ (Siddaramaiah) ಪೂರ್ಣಾವಧಿ ಸಿಎಂ ಆಗಿರ್ತಾರೆ ಎಂಬುದಷ್ಟೇ ಸತ್ಯ ಎಂಬ ಹಠ. ಈ ನಡುವೆ ಮೌನವೇ ಚದುರಂಗ ರಾಜಕೀಯದ ಲಕ್ಷಣ ಎಂಬ ಟ್ರಿಕ್ಸ್ ಶುರು ಮಾಡಿದ್ದಾರೆ ಡಿಕೆಶಿ. ಇಷ್ಟೆಲ್ಲ ಕದನ ಕುತೂಹಲವಾಗಿರುವ ರಾಜ್ಯ ಕಾಂಗ್ರೆಸ್ಗೆ ಅಲ್ಪ ವಿರಾಮದ ಗೆರೆ ಎಳೆಯಲು ಹೈಕಮಾಂಡ್ಗೆ ದೊಡ್ಡ ತಲೆನೋವು ಶುರುವಾಗಿದೆ.
ಅಂದ ಹಾಗೆ ಕಾಂಗ್ರೆಸ್ ಒಳಗೆ ಕಲಹ ಜೋರಾಗಿದೆ. ಒಂದು ಕಡೆ ಅನುದಾನ ಕದನ.. ಪವರ್ ಶೇರ್ ವಾರ್.. ಇದು ಕಾಂಗ್ರೆಸ್ ಹೈಕಮಾಂಡ್ಗೆ ಧರ್ಮಸಂಕಟ ತಂದೊಡ್ಡಿದೆ. ಸಮಸ್ಯೆ ಬಗೆಹರಿಸೋದು, ವಾರ್ನ್ ಮಾಡೋದಷ್ಟೇ ಹೈಕಮಾಂಡ್ ಮುಂದಿರುವ ಆಪ್ಷನ್. ಹಾಗಾಗಿ ಸೋಮವಾರ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ಬೆಳಗ್ಗೆ 11ಗಂಟೆಗೆ ಬೆಂಗಳೂರಿಗೆ (Bengaluru) ಆಗಮಿಸಲಿರುವ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮಧ್ಯಾಹ್ನ 3 ಗಂಟೆ ಬಳಿಕ ಶಾಸಕರಿಗೆ ಸಮಯ ಮೀಸಲಿಟ್ಟಿದ್ದಾರೆ. ಶಾಸಕರು ಒನ್ ಟು ಒನ್ ಸಮಸ್ಯೆ ಹೇಳಿಕೊಳ್ಳಲು ಅವಕಾಶಕ ಕೊಡಲಾಗಿದೆ. ಇದನ್ನೂ ಓದಿ: ಕುಟುಂಬ ರಾಜಕಾರಣದ ಬಗ್ಗೆ ಮಾತಾಡಿದ್ದು ಮುಗೀತು, ನನ್ನ ಜೀವ ಇರೋದೇ ಬಿಜೆಪಿಯಲ್ಲಿ, ಮತ್ತೆ ಹೋಗ್ತೀನಿ: ಈಶ್ವರಪ್ಪ
ಈ ನಡುವೆ ಅಸಮಾಧಾನಿತ ಶಾಸಕರಿಗೆ ಸುರ್ಜೆವಾಲಾ (Randeep Singh Surjewala) ಬುಲಾವ್ ನೀಡಿದ್ದಾರೆ. ಮಧ್ಯಾಹ್ನ 1:30 ಕ್ಕೆ ಭೇಟಿ ಮಾಡುವಂತೆ ಬಿ.ಆರ್ ಪಾಟೀಲ್ಗೆ (B.R Patil), ಮಧ್ಯಾಹ್ನ 2ಕ್ಕೆ ರಾಜು ಕಾಗೆಯವರಿಗೆ ಸಮಯ ನಿಗದಿ ಮಾಡಲಾಗಿದೆ. ಇಬ್ಬರು ಬಹಿರಂಗ ಹೇಳಿಕೆ ನೀಡಿ ಗೊಂದಲದ ಗೂಡಾಗಿತ್ತು ಕಾಂಗ್ರೆಸ್. ಸುರ್ಜೇವಾಲಾ ಶಾಸಕರ ಭೇಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ (D.K Shivakumar) ಕೂಡ ಅಧಿಕೃತಗೊಳಿಸಿದ್ದಾರೆ.
ಪವರ್ ಶೇರ್, ಪೂರ್ಣಾವಧಿ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯ ಪುತ್ರ, ಆಪ್ತರಿಂದ ಬಹಿರಂಗ ಬ್ಯಾಟಿಂಗ್ ಮಾಡಿದ್ದಾರೆ. ಸುರ್ಜೇವಾಲಾ ನನಗೇನು ತಾಕೀತು ಮಾಡಲು ಆಗುತ್ತೆ ಎಂದು ರಾಜಣ್ಣ ಟಾಂಗ್ ಕೊಟ್ಟಿದ್ದಾರೆ. ಆದ್ರೆ ಡಿಕೆಶಿ ಕಡೆಯಿಂದ ಮೌನಾಸ್ತ್ರ..! ದೂರು ಕೊಡುವುದಷ್ಟೇ ತಂತ್ರ ಎಂಬ ಗೇಮ್ ನಡೀತಾ ಇದೆ. ಹಾಗಾಗಿ ಪವರ್ ಶೇರ್ ಟಾಕ್ ವಾರ್ ಗೂ ಹೈಕಮಾಂಡ್ ಬ್ರೇಕ್ ಹಾಕಬೇಕಿದೆ. ಹಾಗಾಗಿ ಸುರ್ಜೇವಾಲಾ ರಾಜ್ಯದಲ್ಲಿ ಮೂರು ದಿನ ಠಿಕಾಣಿ ಹೂಡಲಿದ್ದಾರೆ. ಇದನ್ನೇ ಡಿಕೆಶಿ ಬಳಸಿಕೊಂಡಂತೆ ಕಾಣಿಸ್ತಿದ್ದು, ನೀವು ಚಾಪೆ ಕೆಳಗೆ ತೂರಿದ್ರೆ. ನಾವ್ ರಂಗೋಲಿ ಕೆಳಗೆ ಆಟ ಆಡೋದು ಗೊತ್ತು ಎಂದು ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ. ಶಾಸಕರುಗಳಿಗೆ ಡಿಕೆಶಿಯಿಂದ ಕಾಲ್ ಮಾಡುತ್ತಿದ್ದು, ಹಲೋ..! ಏನ್ರಪಾ ನಿಮ್ದು ಏನಾದ್ರೂ ಪ್ರಾಬ್ಲಂ ಇದೆಯಾ..!? ನಿಮ್ಗೆ ಪ್ರಾಬ್ಲಂ ಇದ್ರೆ ಸುರ್ಜೇವಾಲಾ ಮೀಟ್ ಆಗಿ ಮಾತಾಡಿ. ಓಪನ್ ಆಗಿ ಏನ್ ಬೇಕಾದ್ರೂ ಹೇಳಿ ಅವರ ಹತ್ರ ಅನ್ನೋದು ಡಿಕೆಶಿ ಗೇಮ್ ಪ್ಲ್ಯಾನ್ ಎನ್ನಲಾಗಿದೆ.
ಒಟ್ಟಾರೆ ಕಾಂಗ್ರೆಸ್ ಒಳಗೆ ಎರಡೆರಡು ಆಟ.. ಹೈಕಮಾಂಡ್ಗೆ ಅಸಲಿ ಧರ್ಮಸಂಕಟ ಶುರುವಾಗಿದ್ದು, ಯಾರದ್ದೋ ಬೆಂಕಿಯಲ್ಲಿ ಇನ್ಯಾರು ಬಿಸಿ ಕಾಯಿಸಿಕೊಳ್ಳುವ ರಾಜಕಾರಣ ಕಾಂಗ್ರೆಸ್ ಒಳಗೆ ಯಾರಿಗೆ ವರವೋ.., ಶಾಪವೋ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ರೈಲ್ವೆ ಯೋಜನೆಗಳಿಗೆ ಹಣ ಕೊಡದ ರಾಜ್ಯ ಸರ್ಕಾರ – ಬಿಜೆಪಿ ನಾಯಕರಿಂದ ತೀವ್ರ ಟೀಕೆ