ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ರಣ್ ದೀಪ್ ಸಿಂಗ್ ಸುರ್ಜೆವಾಲ (Randeep Singh Surjewala) ಇಂದು ಬೆಳಗ್ಗೆ ನಟ ಶಿವರಾಜ್ ಕುಮಾರ್ (Shivraj Kumar) ಮನೆಗೆ ಭೇಟಿ ನೀಡಿದ್ದಾರೆ. ಈ ಭೇಟಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಗೀತಾ (Geetha) ಶಿವರಾಜ್ ಕುಮಾರ್ ಸಹೋದರ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸಮಾಧಾನ ಪಡಿಸುವಂತೆ ಮನವಿ ಮಾಡುವುದಕ್ಕಾಗಿ ಸರ್ಜೆವಾಲ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಮಧು ಬಂಗಾರಪ್ಪ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆಯೇ ‘ತಮ್ಮ ಸಹೋದರ ಈ ಬಾರಿ ಮಂತ್ರಿಯಾಗಲಿದ್ದಾರೆ’ ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ‘ಮಧು ಈ ಸಲ ಗ್ಯಾರಂಟಿ ಮಂತ್ರಿಯಾಗಲಿದ್ದಾರೆ’ ಎಂದು ಭವಿಷ್ಯ ನುಡಿದಿದ್ದರು. ಆದರೆ, ಕಾಂಗ್ರೆಸ್ ಸರಕಾರ ಮೊದಲ ಹಂತದ ಮಂತ್ರಿಗಳ ಪಟ್ಟಿಯಲ್ಲಿ ಮಧು ಬಂಗಾರಪ್ಪ ಹೆಸರನ್ನು ಸೇರಿಸದೇ ಭವಿಷ್ಯವನ್ನು ಸುಳ್ಳಾಗಿಸಿತ್ತು. ಹಾಗಾಗಿಯೇ ಸಿಎಂ, ಡಿಸಿಎಂ ಪ್ರಮಾಣ ವಚನ ವೇಳೆ ಮಧು ಗೈರಾಗಿದ್ದರು. ಇದನ್ನೂ ಓದಿ:‘ಯಶ್ 19’ ಸಿನಿಮಾದ ಫೋಟೋ ಲೀಕ್? ರಾಕಿ ಭಾಯ್ ನಯಾ ಲುಕ್
ಒಂದು ಕಡೆ ಮಧು ಬಂಗಾರಪ್ಪ (Madhu Bangarappa) ಅವರನ್ನು ಸಮಾಧಾನಿಸಲು ಗೀತಾ ಅವರಿಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದು ಕಡೆ ಪ್ರಚಾರಕ್ಕೆ ಬಂದಿದ್ದ ಶಿವರಾಜ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಸುರ್ಜೆವಾಲ ಬಂದಿದ್ದರು ಎಂದು ಹೇಳಲಾಗುತ್ತಿದೆ. ಶಿವರಾಜ್ ಕುಮಾರ್ ಹಲವು ಕ್ಷೇತ್ರಗಳ ಪ್ರಚಾರದಲ್ಲಿ ಭಾಗಿಯಾಗಿದ್ದರು. ಜಗದೀಶ್ ಶೆಟ್ಟರ ಹೊರತು ಪಡಿಸಿ ಶಿವಣ್ಣ ಹೋದ ಕಡೆಯಲ್ಲ ಕಾಂಗ್ರೆಸ್ ಗೆದ್ದಿದೆ. ಹಾಗಾಗಿ ಧನ್ಯವಾದಗಳನ್ನು ತಿಳಿಸಲು ಶಿವಣ್ಣ ಮನೆಗೆ ಸುರ್ಜೆವಾಲ ಬಂದಿದ್ದರು ಎಂಬ ಮಾಹಿತಿಯೂ ಇದೆ.
ಇಷ್ಟೆಲ್ಲ ಊಹಾಪೋಹಗಳು ಹರಿದಾಡುತ್ತಿದ್ದರೂ, ಭೇಟಿಯ ವಿಚಾರವನ್ನೂ ನಿಗೂಢವಾಗಿ ಇಡಲಾಗಿದೆ. ಸುರ್ಜೆವಾಲ ಬಂದಿದ್ದ ಕಾರಣವನ್ನು ಶಿವಣ್ಣ ಆಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ಭೇಟಿ ರಹಸ್ಯವಾಗಿ ಉಳಿದುಕೊಂಡಿದೆ.