ನಿಗದಿತ ದಿನ ಆರಂಭ ಅನುಮಾನ – ಈ ವರ್ಷ ಶಾಲಾ ಪಠ್ಯಗಳ ಕಡಿತ

Public TV
3 Min Read
SURESH KUMAR 7

– ಹೆಚ್ಚುವರಿ ಪಠ್ಯ ಗುರುತಿಸಲು ಸೂಚನೆ
– ಹಿರಿಯ ಅಧಿಕಾರಿಗಳ ಜೊತೆ ಸುರೇಶ್ ಕುಮಾರ್ ಸಭೆ

ಬೆಂಗಳೂರು: ಕೋವಿಡ್ ನಿಂದಾಗಿ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಸರಿಹೊಂದುವಂತೆ ಶೈಕ್ಷಣಿಕ ವರ್ಷವನ್ನು ಸರಿದೂಗಿಸಬೇಕಾದ ಅಗತ್ಯವಿರುವುದರಿಂದ ಶಾಲಾ ಶೈಕ್ಷಣಿಕ ಪಠ್ಯವನ್ನು ಆ ಅವಧಿಗೆ ತಕ್ಕಂತೆ ರೂಪಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸಚಿವರು ಈ ಶೈಕ್ಷಣಿಕ ಸಾಲಿನ ಪ್ರಾರಂಭದ ಬಗ್ಗೆ ಈ ಹಂತದಲ್ಲಿ ನಿರ್ಣಯಿಸಲು ಸಾಧ್ಯವಾಗದ ಕಾರಣ 1ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿ ಎನ್ನುವ ಪಠ್ಯವನ್ನು ಗುರುತಿಸುವ ಪ್ರಯತ್ನಕ್ಕೆ ಕೂಡಲೇ ಚಾಲನೆ ನೀಡಬೇಕೆಂದರು.

Private School Students

ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದ ಮೇಲೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಅನವಶ್ಯಕ ಪುನರಾವರ್ತಿತವಾದ ಪಠ್ಯವನ್ನು ಕೈಬಿಡಬೇಕು. ಅತ್ಯಾವಶ್ಯಕವಾದ ಪಠ್ಯವನ್ನು ಉಳಿಸಿಕೊಳ್ಳಲು ಕ್ರಿಯಾ ಯೋಜನೆಯನ್ನು ಕೂಡಲೇ ಸಿದ್ಧಪಡಿಸಬೇಕು. ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ಕಡಿತವಾಗಬಹುದಾದ ಅವಧಿಯ ಆಧಾರದಲ್ಲಿ ಪ್ರತಿ ತರಗತಿ ಹಾಗೂ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ 15 ದಿನಗಳ, 1 ತಿಂಗಳ, ಒಂದುವರೆ ತಿಂಗಳ, 2 ತಿಂಗಳ ಹಂತವಾರು ಹೆಚ್ಚುವರಿಯಾಗಬಹುದಾದ ಪಠ್ಯಗಳನ್ನುಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತ್ರತ ವರದಿ ತಯಾರಿಸಬೇಕೆಂದು ಸಚಿವರು ಸೂಚಿಸಿದರು.

ಕೋವಿಡ್ ಕುರಿತ ಪಠ್ಯಕ್ರಮ ಜಾರಿ: ಇದೇ ಶೈಕ್ಷಣಿಕ ಸಾಲಿನಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಹೊಂದಾಣಿಕೆಗಳ ಬಗ್ಗೆ ಪಠ್ಯವನ್ನು ಎಲ್ಲ ತರಗತಿಗಳಿಗೆ ಬೋಧಿಸುವಲ್ಲಿ ಕೂಡಲೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ ಸಚಿವರು, ಕೋವಿಡ್-19 ಕುರಿತಂತೆ ಆಯಾ ವಯೋಮಾನದ ವಿದ್ಯಾರ್ಥಿಗಳಿಗೆ ಆಕರ್ಷಣೀಯವಾಗುವ ರೀತಿಯಲ್ಲಿ ಕಿರುಪಠ್ಯ ರಚನೆ ಮಾಡಿ ಶಾಲೆಗಳಿಗೆ ಪೂರೈಸುವುದರ ಜೊತೆಗೆ ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿಯೂ ಈ ಕುರಿತಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಇದು ಪಠ್ಯಕ್ರಮದ ಒಂದು ಭಾಗವಾಗಿ ಕಡ್ಡಾಯವಾಗಿ ಕಲಿಯಬೇಕಾದ ವಿಷಯವಾಗಿರುವಂತೆ ಕಟ್ಟುನಿಟ್ಟಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು ಎಂದು ಸಹ ಅವರು ಸೂಚಿಸಿದರು.

school

ಯೂ-ಟ್ಯೂಬ್ ಚಾನೆಲ್ ಬೋಧನೆ: ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಮಾಹಿತಿ ತಂತ್ರಜ್ಞಾನಾಧಾರಿತವಾದ ಬೋಧನೆಯನ್ನೂ ಸಹ ನಾವು ಪೂರಕ ಕಲಿಕೆಯಾಗಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ 1ರಿಂದ 10ನೇ ತರಗತಿವರೆಗೆ ವಿಷಯವಾರು, ಅಧ್ಯಾಯವಾರು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳ ಬೋಧನೆಯನ್ನು ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಚಿತ್ರೀಕರಿಸಿ ಯೂ-ಟ್ಯೂಬ್ ಚಾನೆಲ್ ನಲ್ಲಿ ಶಾಶ್ವತವಾಗಿ ಲಭ್ಯವಿರುವಂತೆ ಮಾಡಲು ಸುರೇಶ್ ಕುಮಾರ್ ಸೂಚನೆ ನೀಡಿದರು.

ಅಂತೆಯೇ ಸಾಮಾಜಿಕ ಅಂತರ ನಮ್ಮ ಬದುಕಿನ ಸಹಜ ರೀತಿಯಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಅಂತರವನ್ನು ಕಾಯ್ದುಕೊಳ್ಳುವ ರೀತಿಯ ಕಲಿಕಾ ವಾತಾವರಣ ಕಲ್ಪಿಸುವ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದಾಗಿದ್ದು, ಪರ್ಯಾಯ ಮಾರ್ಗಗಳ ಕುರಿತಂತೆ ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸಲೂ ಸಹ ಸಚಿವರು ಸೂಚಸಿದರು.

train school 2

ಇಂತಹ ಸಂದರ್ಭದಲ್ಲಿ ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಶಾಲೆಗಳ ಕಲಿಕಾ ವಾತಾವರಣದ ಕುರಿತಂತೆ ಭರವಸೆಯನ್ನು ಮೂಡಿಸುವುದು ಶಿಕ್ಷಣ ಇಲಾಖೆಯ ಪ್ರಥಮ ಆದ್ಯತೆಯಾಗಬೇಕಿದ್ದು, ಈ ಕುರಿತಂತೆ ಶಿಕ್ಷಕರಿಗೆ ತರಬೇತಿ ನೀಡಿಕೆ ಮತ್ತು ಸಂವೇದನೆಗೊಳಿಸುವ ಅಭಿಯಾನವನ್ನು ಕೈಗೆತ್ತಿಕೊಳ್ಳಬೇಕು. ಆರ್ ಟಿ ಇ ಅಡಿಯ ನಿರಂತರ ಕಲಿಕಾ ಮೌಲ್ಯಮಾಪನದ ಆಶಯವನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವಲ್ಲಿ ಇಂದಿನ ಪರಿಸ್ಥಿತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಕ್ರಮಗಳ ಬಗ್ಗೆ ಅಧ್ಯಯನ ಮಾಡಿ ತಮಗೆ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದ ಸಚಿವರು, ತಂತ್ರಜ್ಞಾನ ಬಳಕೆ ದೃಷ್ಟಿಯಿಂದ ಸರ್ಕಾರದ ಮಾಹಿತಿ ತಂತ್ರಜ್ಞಾನ ವೇದಿಕೆಗಳನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡು ನೀತಿ ನಿರೂಪಣೆಗೆ ಕ್ರಮ ವಹಿಸಲು ಸೂಚನೆ ನೀಡಿದರು.

sslc exam 2

ಟಿಇಟಿ ಪರೀಕ್ಷಾ ದಿನಾಂಕ ನಿಗದಿಗೊಳಿಸಿ:
ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಣೆಯಾದ ಕೂಡಲೇ ಟಿಇಟಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಬೇಕೆಂದು ಸೂಚನೆ ನೀಡಿದ ಸಚಿವರು, ಮುಂದಿನ ದಿನಗಳಲ್ಲಿ ಈ ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಿರ್ವಹಣೆ ಮಾಡುವಲ್ಲಿಪೂರ್ವ ಸಿದ್ಧತಾ ಕ್ರಮಗಳನ್ನು ಪ್ರಾರಂಭಿಸಲು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಅನುಮೋದನೆಗೊಂಡ ವರ್ಗಾವಣಾ ಕಾಯ್ದೆಯ ನಿಯಮಗಳನ್ನು ಶೀಘ್ರ ರೂಪಿಸಿ ವರ್ಗಾವಣಾ ವೇಳಾಪಟ್ಟಿ ಪ್ರಕಟಿಸಲು ನಿರ್ದೇಶನ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಆಯುಕ್ತ ಡಾ. ಕೆ.ಜೆ. ಜಗದೀಶ್, ಎಸ್‍ಎಸ್ ಕೆ ಯೋಜನಾ ನಿರ್ದೇಶಕ ಡಾ. ಎಂ.ಟಿ. ರೇಜು, ಪಿಯು ಇಲಾಖೆ ನಿರ್ದೇಶಕಿ ಕನಗವಲ್ಲಿಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *