ಹಾಸನ: ನನ್ನ ಈ ಗೆಲುವಿಗೆ ಕಾರಣರಾದ ನನ್ನ ತಾಯಿಯ ತ್ಯಾಗಕ್ಕೆ ನಾನು ಯಾವರೀತಿ ಧನ್ಯವಾದ ಹೇಳಬೇಕು ತಿಳಿಯುತ್ತಿಲ್ಲ ಎಂದು ತಮ್ಮ ಗೆಲುವಿನ ಬಗ್ಗೆ ಸೂರಜ್ ರೇವಣ್ಣ ಸಂತೋಷವನ್ನು ಹಂಚಿಕೊಂಡಿದ್ದರು.
ಎಂಎಲ್ಸಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಈ ಫಲಿತಾಂಶ ಇಡೀ ರಾಜ್ಯಕ್ಕೆ ಸಂದೇಶವಾಗಿದೆ. ಜೆಡಿಎಸ್ ಮುಳುಗಿಹೋಯ್ತು, ಕುಟುಂಬ ರಾಜಕಾರಣ ಎನ್ನುತ್ತಿರುವವರಿಗೆ ಈಗ ಮತದಾರರು ಪಾಠ ಕಲಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ನಮ್ಮ ತಂದೆಯವರನ್ನು ಅಭಿವೃದ್ಧಿಯ ಹರಿಕಾರ ಎನ್ನುತ್ತಾರೆ. ಅವರ ಜೊತೆ ನಮ್ಮ ಎಲ್ಲ ಶಾಸಕರು ಕೈಜೋಡಿಸಿ ಒಳ್ಳೇ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಅಭಿವೃದ್ಧಿ ಆಗಬೇಕಂದ್ರೆ ಜೆಡಿಎಸ್ನಿಂದಲೇ ಎಂದು ಅಭೂತಪೂರ್ವವಾಗಿ ಗೆಲ್ಲಿಸಿದ್ದಾರೆ. ಹಿಂದೆ ಸಂಸತ್ ಚುನಾವಣೆ ಇದ್ದಾಗ ನಾನು ಮತ್ತು ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಆಗುತ್ತಾರೆ ಎನ್ನುತ್ತಿದ್ದರು. ಅಂತಿಮವಾಗಿ ಪ್ರಜ್ವಲ್ ಅಭ್ಯರ್ಥಿ ಆದರು. ಇಲ್ಲಿಯೂ ಕೂಡ ನಮ್ಮ ತಾಯಿ ಅಭ್ಯರ್ಥಿ ಆಗಬೇಕು ಎನ್ನುವುದು ಬಹುತೇಕರ ಅಭಿಪ್ರಾಯ ಆಗಿತ್ತು. ನನ್ನ ಹೆಸರನ್ನು ಕೂಡ ಹೇಳುತ್ತಿದ್ದರು. ಆದರೆ ಇಂದು ನಮ್ಮ ತಾಯಿಯ ತ್ಯಾಗಕ್ಕೆ ನಾನು ಯಾವರೀತಿ ಧನ್ಯವಾದ ತಿಳಿಸಬೇಕು ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು
ಜನವರಿ ಒಂದು ನನ್ನ ಹುಟ್ಟಿದ ಹಬ್ಬ. ಅದರೆ ಇಂದು ರಾಜಕೀಯವಾಗಿ ನನಗೆ ಜನ್ಮ ನೀಡಿದ್ದಾರೆ. ನಾನು ಎಂಎಲ್ಸಿ ಆಗಲು ಬಹುಮುಖ್ಯ ಪಾತ್ರವಹಿಸಿದ ಭವಾನಿ ರೇವಣ್ಣ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 1,433 ಮತಗಳ ಅಂತರದಿಂದ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ 731 ಹಾಗೂ ಬಿಜೆಪಿ ಅಭ್ಯರ್ಥಿ 354 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ