ನವದೆಹಲಿ: ಪಂಜಾಬ್ನ (Punjab) ಮಾಜಿ ಸಿಎಂ ಬಿಯಾಂತ್ ಸಿಂಗ್ (Beant Singh) ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಬಲ್ವಂತ್ ಸಿಂಗ್ ರಾಜೋನಾ (Balwant Singh Rajoana) ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ಕೂಡಲೇ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ (Supreme Court), ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಸೂಚಿಸಿದೆ.
ಬಲ್ವಂತ್ ಸಿಂಗ್ ರಾಜೋನಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಮಂಡಿಸಿ, ಎರಡು ವಾರಗಳಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸಬೇಕು ಎಂದು ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಕೋರ್ಟ್ ನಿರ್ದೇಶಿಸಿದೆ.
90ರ ದಶಕದಲ್ಲಿ ಪಂಜಾಬ್ನಲ್ಲಿ ಖಾಲಿಸ್ತಾನಿ ಉಗ್ರರ ಉಪಟಳ ಹೆಚ್ಚಾಗಿದ್ದಾಗ, ಕಡಿವಾಣ ಹಾಕಲು ಬಿಯಾಂತ್ ಸಿಂಗ್ ಸರ್ಕಾರ ದಿಟ್ಟ ಕಾರ್ಯಾಚರಣೆ ಕೈಗೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ 1995ರ ಆಗಸ್ಟ್ 31ರಂದು ಪಂಜಾಬ್ ಸಚಿವಾಲಯದ ಹೊರಭಾಗದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಬಿಯಾಂತ್ ಸೇರಿದಂತೆ 16 ಜನರು ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ 2007ರಲ್ಲಿಯೇ ಬಲ್ವಂತ್ ಸಿಂಗ್ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಆತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯು ಹಲವು ವರ್ಷಗಳಿಂದ ಇತ್ಯರ್ಥಗೊಂಡಿಲ್ಲ. ಹಾಗಾಗಿ, ಮಾನವೀಯ ನೆಲಗಟ್ಟಿನ ಮೇಲೆ ತನಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. 2023ರ ಮೇ 3ರಂದು ವಿಚಾರಣೆ ನಡೆಸಿದ್ದ ಕೋರ್ಟ್, ಬಲ್ವಂತ್ ಸಿಂಗ್ ಅರ್ಜಿಯನ್ನು ವಜಾಗೊಳಿಸಿತ್ತು.