– ಸಾವಿನ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಪಿಐಎಲ್ ವಜಾ
ಮುಂಬೈ: ಬಾಲಿವುಡ್ ಚಾಂದಿನಿ ಶ್ರೀದೇವಿ ಸಾವಿನ ತನಿಖೆಗೆ ಆದೇಶ ನೀಡಬೇಕೆಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಜಾಗೊಳಿಸಿದೆ.
ಫಿಲ್ಮ್ ಮೇಕರ್ ಸುನಿಲ್ ಸಿಂಗ್ ಎಂಬವರು, ಶ್ರೀದೇವಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ, ಈ ಹಿಂದೆ ಈ ರೀತಿಯ ಆರೋಪ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇಂತಹ ಅರ್ಜಿಯನ್ನು ಪುರಸ್ಕರಿಸಲ್ಲ ಎಂದು ಹೇಳಿ ಪಿಐಎಲ್ ವಜಾಗೊಳಿಸಿದ್ದಾರೆ.
ಅರ್ಜಿದಾರರ ಪರ ವಕೀಲರಾದ ವಿಕಾಸ್ ಸಿಂಗ್, ನಟಿ ಶ್ರೀದೇವಿ ಹೆಸರಿನಲ್ಲಿ 240 ಕೋಟಿ ರೂ. ವಿಮೆ ಮಾಡಿಸಲಾಗಿತ್ತು. ಶ್ರೀದೇವಿ ಯುಎಇ ಯಲ್ಲಿ ಮೃತಪಟ್ಟರೆ ಮಾತ್ರ ವಾರಸುದಾರರಿಗೆ ಹಣ ಸಿಗುತ್ತಿತ್ತು. ಈ ಕಾರಣಕ್ಕೆ ಈ ಸಾವಿನ ಹಿಂದೆ ಅನುಮಾನವಿದೆ ಎಂದು ವಾದಿಸಿದ್ದರು.
54 ವರ್ಷದ 5 ಅಡಿ 7 ಇಂಚು ಎತ್ತರದ ಶ್ರೀದೇವಿ ಫೆಬ್ರವರಿ 24ರಂದು ದುಬೈನ ಹೋಟೆಲ್ ನಲ್ಲಿ ಸಾವನ್ನಪ್ಪಿದ್ದಾಗ ಬಾತ್ ಟಾಬ್ಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ದುಬೈ ಪೊಲೀಸರು ಆರಂಭದಲ್ಲಿ ತಿಳಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶ್ರೀದೇವಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನುವ ಫಲಿತಾಂಶ ಬಂದಿತ್ತು. ಹೀಗಾಗಿ ಸಾವಿನ ತನಿಖೆಗೆ ಅನುಮತಿ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಈ ಹಿಂದೆ ಅರ್ಜಿದಾರರು ದೆಹಲಿ ಹೈ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಈ ಸಾವಿನ ಬಗ್ಗೆ ಭಾರತ ಮತ್ತು ದುಬೈ ತನಿಖೆ ನಡೆಸುತ್ತಿದೆ. ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿ ಮಾರ್ಚ್ 9 ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲಿ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಸುಪ್ರೀಂನಲ್ಲಿ ಅರ್ಜಿ ಹಾಕಿದ್ದರು.
Supreme Court dismissed the petition seeking a probe into death of actor Sridevi. (File pic) pic.twitter.com/KKcjj2xOL8
— ANI (@ANI) May 11, 2018
https://youtu.be/Oj-verPWQPo