ನವದೆಹಲಿ: ಜಗತ್ತಿನಾದ್ಯಂತ ಸದ್ದು ಮಾಡಿದ್ದ ಕರ್ನಾಟಕದ ಹಿಜಬ್(Hijab) ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್(Supreme Court ) ಗುರುವಾರ ಮಹತ್ವದ ತೀರ್ಪು ಪ್ರಕಟಿಸಲಿದೆ.
ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೂರು ವಾರಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಇದೇ 16ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಪ್ರೀಂಕೋರ್ಟ್ ಹಿಜಬ್ ವಿವಾದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಲಿದೆ.
ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ರಾಜ್ಯ ಸರ್ಕಾರದ ನಿರ್ಧಾರ ಸರಿಯೋ? ತಪ್ಪೋ? ಎಂಬುದನ್ನು ಪ್ರಕಟಿಸಲಿದೆ. ಸೆಪ್ಟೆಂಬರ್ 22ರವರೆಗೂ ನಿರಂತರವಾಗಿ 10 ದಿನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿತ್ತು.
ಸರ್ಕಾರದ ಪರ ವಾದ ಏನು?
ಶಾಲೆಗಳಲ್ಲಿ ಧರ್ಮದ ಆಧಾರದ ಮೇಲೆ ವರ್ಗೀಕರಣ ಮಾಡಲಾಗುವುದಿಲ್ಲ. ಶಾಲೆ ಒಂದು ಸುರಕ್ಷಿತ ಸಂಸ್ಥೆ, ಇಲ್ಲಿ ಎಲ್ಲರೂ ಸಮವಸ್ತ್ರ ಧರಿಸಬೇಕು. ಯಾವುದೇ ಧರ್ಮಾಚರಣೆ ಕಾನೂನಿನ ಮಿತಿಯಲ್ಲಿರಬೇಕು.
ರಾಜ್ಯ ಸರ್ಕಾರದ ಆದೇಶ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ಯಾವುದೇ ಸಮುದಾಯದ ನಿರ್ದಿಷ್ಟ ಉಡುಪು ಧರಿಸಲು ನಿಯಂತ್ರಣ ಹೇರುವುದಿಲ್ಲ. ಬದಲಿಗೆ ಸಮವಸ್ತ್ರದ ಅಗತ್ಯದ ಬಗ್ಗೆ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.
ಹಿಜಬ್ ವಿವಾದದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪಿಎಫ್ಐ ಸೇರಿ ಹಲವು ಸಂಘಟನೆಗಳು ಇದರಲ್ಲಿವೆ. ಕುರಾನ್ನಲ್ಲಿ ಹಿಜಬ್ ಕಡ್ಡಾಯ ಎಂದು ತಿಳಿಸಿಲ್ಲ. ಹಲವು ದೇಶಗಳಲ್ಲಿ ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುತ್ತಿಲ್ಲ. ಇದನ್ನೂ ಓದಿ: ನಿದ್ರೆ ಮಾಡುತ್ತಾ ಜನರನ್ನು ಸಾಲದ ಶೂಲಕ್ಕೇರಿಸಿದ್ದು ಸಿದ್ದರಾಮಯ್ಯ – BJP ತಿರುಗೇಟು
ಅರ್ಜಿದಾರರ ವಾದ ಏನು?
ಸರ್ಕಾರದ ಆದೇಶ ನಿರ್ದಿಷ್ಟ ಶಿರವಸ್ತ್ರ ಗುರಿಯಾಗಿಸಿಕೊಂಡಿದೆ. ಇದನ್ನು ಧರ್ಮನಿರಪೇಕ್ಷ ನೆಲೆಯಲ್ಲಿ ನೋಡಲಾಗದು. ಹಿಜಬ್ ಹೋರಾಟದ ಹಿಂದೆ ಪಿಎಫ್ಐ ಕೈವಾಡ ಎನ್ನುತ್ತಿದ್ದಾರೆ. ಆದರೆ ಸರ್ಕಾರದ ದಾಖಲೆಯಲ್ಲಿ ಯಾವುದೇ ಉಲ್ಲೇಖವಿಲ್ಲ. ಆದರೂ ಸಾಲಿಸಿಟರ್ ಜನರಲ್ ಪಿಎಫ್ಐ ವಿಚಾರ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಮಾಧ್ಯಮಗಳು ಅದನ್ನು ಎತ್ತಿ ತೋರಿಸಿವೆ .
ಸಾಲಿಸಿಟರ್ ಜನರಲ್ ಮೆಹ್ತಾ ಅವರ ಈ ವಾದ ಪ್ರಸುತ್ತವಲ್ಲ. ಧಾರ್ಮಿಕ ನಂಬಿಕೆಯುಳ್ಳವರಿಗೆ ಹಿಜಬ್ ಅತ್ಯಗತ್ಯ. ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಮೂಲಭೂತ ಹಕ್ಕು ಪರಿಶೀಲಿಸಿ.