ನವದೆಹಲಿ: ಭಾರತೀಯ ಯುವ ಕಾಂಗ್ರೆಸ್ (Congress) ಅಧ್ಯಕ್ಷ ಬಿವಿ ಶ್ರೀನಿವಾಸ್ (BV Srinivas) ಅವರ ವಿರುದ್ಧದ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (Supreme Court) ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠವು ಜಾಮೀನು ನೀಡಿದೆ.
ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಕರಣದ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ನಿರೀಕ್ಷಣಾ ಜಾಮೀನು ಪಡೆಯಲು ಶ್ರೀನಿವಾಸ್ ಅವರು ಅರ್ಹರು ಎಂದು ಕೋರ್ಟ್ ಹೇಳಿದೆ. 50,000 ರೂ. ಬಾಂಡ್ ಪಡೆದು ಜಾಮೀನು ನೀಡಿದ ನ್ಯಾಯಾಲಯ ತನಿಖೆಗೆ ಸಹಕರಿಸುವಂತೆ ಸೂಚಿಸಿತು. ಈ ವೇಳೆ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಹಿಂಡನ್ಬರ್ಗ್ ಪ್ರಕರಣ – ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ
ಶ್ರೀನಿವಾಸ್ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಗುವಾಹಟಿ ಹೈಕೋರ್ಟ್ (Gauhati High Court) ಮೆಟ್ಟಿಲೇರಿದ್ದರು. ಎಫ್ಐಆರ್ ದಾಖಲಿಸಲು ಅಸ್ಸಾಂ (Assam) ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಎಂದು ಆರೋಪಿಸಿದ್ದರು. ಆದರೆ ಹೈಕೋರ್ಟ್ ಮನವಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಮೊರೆ ಹೋಗಿದ್ದರು.
ಮಾ. 25 ರಂದು ರಾಯ್ಪುರದ ಮೇಫೇರ್ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಅಧಿವೇಶನದ ವೇಳೆ ಶ್ರೀನಿವಾಸ್ ಹೋಟೆಲ್ನಲ್ಲಿ ಥಳಿಸಿದ್ದರು. ತನ್ನ ತೋಳುಗಳನ್ನು ಹಿಡಿದುಕೊಂಡು ದೌರ್ಜನ್ಯ ಎಸಗಿದ್ದರು. ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅಸ್ಸಾಂ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಅಂಗಿತಾ ದತ್ತಾ ಅವರು ದೂರು ನೀಡಿದ್ದರು. ಅಲ್ಲದೆ ಅವರ ವರ್ತನೆ ಬಗ್ಗೆ ಕಾಂಗ್ರೆಸ್ನ ಉನ್ನತ ನಾಯಕರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದತ್ತಾ ಆರೋಪಿಸಿದ್ದರು.
ಶ್ರೀನಿವಾಸ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ವಕೀಲ ರಾಜೇಶ್ ಇನಾಮದಾರ್ ವಾದ ಮಂಡಿಸಿದರು. ಅಸ್ಸಾಂ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ವಾದ ಮಂಡಿಸಿದರು. ಇದನ್ನೂ ಓದಿ: ಗೋ ಸಾಗಾಣಿಕೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ – ಪುನೀತ್ ಕೆರೆಹಳ್ಳಿ ಸೇರಿ ಐವರಿಗೆ ಜಾಮೀನು