ನವದೆಹಲಿ: ಬರಗಾದಲ್ಲಿ ಹನಿ ನೀರು ಸಿಗದೇ ರಾಜ್ಯದ ಜನರು ತತ್ತರಿಸುತ್ತಿದ್ದರೂ ಇತ್ತ ಮಂಡ್ಯದಲ್ಲಿರುವ ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡುವ ಆದೇಶ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೆಲ್ಮನವಿ ಅರ್ಜಿಗಳ ವಿಚಾರಣೆ ಇಂದು ಸುಪ್ರಿಂಕೊರ್ಟ್ ನಲ್ಲಿ ನಡೆಯಿತು. ಈ ವೇಳೆ ತಮಿಳುನಾಡು ಕರ್ನಾಟಕ ಸೂಚನೆಯಂತೆ ಸರಿಯಾದ ಪ್ರಮಾಣದ ನೀರು ಬಿಡುತ್ತಿಲ್ಲ ಎನ್ನುವ ಖ್ಯಾತೆ ತೆಗೆಯಿತು. ಕರ್ನಾಟಕ ಕುಡಿಯುವ ನೀರಿನ ಹೆಸರಲ್ಲಿ ಕೃಷಿಗೆ ನೀರು ಬಳಕೆ ಮಾಡುತ್ತಿದೆ ನೀರು ಸರಿಯಾಗಿ ಬಿಡುವಂತೆ ಸೂಚಿಸಲು ತಮಿಳುನಾಡು ಪರ ಶೇಖರ್ ನಾಫಡೆ ವಾದ ಮಂಡಿಸಿದರು.
ಇದಕ್ಕೆ ತಕ್ಕ ಉತ್ತರ ಕೊಟ್ಟ ರಾಜ್ಯ ಪರ ಹಿರಿಯ ವಕೀಲ ಫಾಲಿ ನಾರಿಮನ್ ರಾಜ್ಯದಲ್ಲಿ ಬರಗಾಲ ತೀವ್ರವಾಗಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮುಖ್ಯವಾಗಿ ಕೆಆರ್ಎಸ್ ಜಲಾಶಯದಲ್ಲಿ ನೀರಿಲ್ಲ ನೀರು ಹೇಗೆ ಸಾಧ್ಯ ಎಂಬ ಪ್ರಶ್ನೆ ಹಾಕಿದರು. ಇರುವ ನೀರಿನಲ್ಲಿ ಸಾಧ್ಯವಾದಷ್ಟು ನೀರನ್ನು ಸುಪ್ರೀಂಕೋರ್ಟ್ ಸೂಚನೆಯಂತೆ ಹರಿಸಲಾಗುತ್ತಿದೆ ಅಂತಾ ತಮಿಳುನಾಡಿಗೆ ಖಡಕ್ ಉತ್ತರ ನೀಡಿದರು.
ವಿಚಾರಣೆ ಆಲಿಸಿದ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಜನವರಿ 4 ರಂದು ನೀಡಿದ ಆದೇಶದಂತೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ಸೂಚನೆ ನೀಡಿತು. ಜೊತೆಗೆ ಈ ಹಿಂದೆ ಹೇಳಿದಂತೆ ಕಾವೇರಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ನಿಟ್ಟಿನಲ್ಲಿ ಬೇಸಿಗೆ ರಜೆಯ ನಂತರ ಜುಲೈ 11 ರಿಂದ 15 ದಿನಗಳಲ್ಲಿ ದೀರ್ಘಾವಧಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿತು.
ಇದನ್ನೂ ಓದಿ: ಕಾವೇರಿ ವಿಚಾರಣೆ- ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ: ಸುಪ್ರೀಂ ಪ್ರಶ್ನೆ