– ರಣವೀರ್ ಸಿಂಗ್ ವಿರುದ್ಧ ಯಾವುದೇ ಬಲವಂತದ ಕ್ರಮ ಬೇಡ: ಹೈಕೋರ್ಟ್
– ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ದೈವಕ್ಕೆ ಅವಮಾನದ ಆರೋಪ ಹೊತ್ತಿರುವ ರಣವೀರ್ ಸಿಂಗ್ಗೆ (Ranveer Singh) ಇಂದು ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ (Highcourt), ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಪೊಲೀಸರಿಗೆ ಸೂಚನೆ ನೀಡಿದೆ. ಇದೇ ವೇಳೆ ರಣವೀರ್ ಸಿಂಗ್ರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಒಂದು ಭಾಗದ ಜನರ ಮತ್ತು ಧಾರ್ಮಿಕ ಭಾವನೆಗೆ ದಕ್ಕೆ ತರುವ ಹಾಗೆ ಮಾತಬಾಡಬಾರದು. ಅದು ರಣವೀರ್ ಸಿಂಗ್ ಅಗಿರಲಿ, ಯಾರೇ ಅಗಿದ್ದು ಸರಿ ಹಾಗೆ ಮಾತನಾಡುವುದು ಸಲ್ಲದು. ಸೂಪರ್ ಸ್ಟಾರ್ ಅಗಿರುವ ರಣವೀರ್ ಸಿಂಗ್ ಗೆ ಸಾಕಷ್ಟು ಜನ ಫಾಲೋ ಮಾಡುವವರು ಇದ್ದಾರೆ. ಹೀಗಾಗಿ ಇದನ್ನ ಹಗುರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಗೋವಾದಲ್ಲಿ ಸಿನಿಮಾ ಫೆಸ್ಟಿವಲ್ ವೇಳೆ ಕಾಂತಾರ ಸಿನಿಮಾ ಕುರಿತು ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪವಿತ್ತು. ನಟ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ದೈವವನ್ನು ಫೀಮೇಲ್ ಗೋಸ್ಟ್ ಎಂದು ಹೇಳಿಕೆ ನೀಡಿದ್ದ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾ.ನಾಗಪ್ರಸನ್ನ ಪೀಠ ರಣವೀರ್ ಸಿಂಗ್ರನ್ನ ತರಾಟಗೆ ತೆಗೆದುಕೊಂಡಿದೆ.

ರಣವೀರ್ ಸಿಂಗ್ ಪರವಾಗಿ ಸಜನ್ ಪೂವಯ್ಯ ಕೋರ್ಟ್ ಗೆ ಹಾಜರ್ ಆಗಿ ವಾದ ಮಂಡಿಸಿದ್ರು. ರಿಷಬ್ ಶೆಟ್ಟಿ ಅಭಿನಯನದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಮಾತನಾಡಿದ ಪದಗಳಿಗು ಕೂಡ ಕ್ಷಮೆ ಕೋರಲಾಗಿದೆ. ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿಲ್ಲ. ಅಲ್ಲದೆ ತನಿಖೆಗೆ ಕೂಡ ಸಹಕಾರ ನೀಡುವುದಾಗಿ ಕೋರ್ಟ್ಗೆ ಮಾಹಿತಿ ನೀಡಿದ್ರು. ಇದೇ ವೇಳೆ ದೂರುದಾರರ ಪರ ವಕೀಲರು ರಣವೀರ್ ಪತ್ನಿ ದೀಪಿಕಾ ಕೂಡ ಕನ್ನಡದವರು ಆಗಿದ್ದಾರೆ. ಕನ್ನಡ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಮುಂದಿನ ಆದೇಶದವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸಿದಂತೆ ಆದೇಶ ಮಾಡಿ ಮುಂದಿನ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.
ಪೀಠ ಹೇಳಿದ್ದೇನು?
ಸೂಪರ್ ಸ್ಟಾರ್ ಆದರೇನು ಕಾನೂನಿನಿಗಿಂತ ಮೇಲಿಲ್ಲ. ಇಲ್ಲಿ ಎರಡು ವಿಚಾರಗಳಿವೆ. ದೇವತೆಯಾದ ಚಾಮುಂಡಿಯ ಪಾತ್ರವನ್ನು ರಿಷಬ್ ಶೆಟ್ಟಿ ನಿಭಾಯಿಸಿದ್ದಾರೆ. ಜನರ ಧಾರ್ಮಿಕ ಭಾವನೆಗಳ ಬಗ್ಗೆ ರಣವೀರ್ಗೆ ಗೊತ್ತಿಲ್ಲದಿರಬಹುದು. ಮಹಿಳಾ ದೆವ್ವ ಎಂದು ಹೇಳಿ ರಿಷಬ್ ಅವರ ನಟನೆಯನ್ನು ಮಿಮಿಕ್ರಿ ಮಾಡಿದ್ದಾರೆ. ಇದು ನಿಜಕ್ಕೂ ಭಾವನೆಗಳಿಗೆ ಘಾಸಿ ಮಾಡಿರುವ ವಿಚಾರ. ಇಷ್ಟು ಹಗುರವಾಗಿ ರಣವೀರ್ ಮಾತನಾಡಬಾರದು. ನೀವು ರಣವೀರ್ ಸಿಂಗ್ ಅಥವಾ ಬೇರಾರೇ ಆದರೂ ಅಷ್ಟು ಹಗುರವಾಗಿ ಮಾತನಾಡಬಾರದು.
ಜನರ ಮೇಲೆ ಪ್ರಭಾವ ಹೊಂದಿರುವ ನಟನಾಗಿ ರಣವೀರ್ ಜವಾಬ್ದಾರಿಯಿಂದ ಇರಬೇಕು. ದೇವರ ಬಗ್ಗೆ ಮಾತನಾಡುವಾಗ ಅವರು ತಿಳಿದುಕೊಂಡು ಮಾತನಾಡಬೇಕಿತ್ತು. ದೈವವನ್ನು ದೆವ್ವ ಎನ್ನಲಾಗದು. ಇನ್ನೊಬ್ಬರ ಭಾವನೆಗೆ ಘಾಸಿ ಮಾಡುವ ಅಧಿಕಾರ ರಣವೀರ್ಗೆ ಇಲ್ಲ. ರಣವೀರ್ ಕ್ಷಮೆ ಕೋರಿರಬಹುದು. ಆದರೆ, ಹೇಳಿದ್ದೆಲ್ಲಾ ಹೊರಟು ಹೋಗುತ್ತದೆಯೇ? ಜನರು ಅದನ್ನು ಮರೆತು ಬಿಡಬಹುದು. ಆದರೆ, ಇಂಟೆರ್ನೆಟ್ ಮರೆಯುವುದಿಲ್ಲ. ವೇದಿಕೆಗೆ ಹೋಗಿ ಇದೆಲ್ಲವನ್ನೂ ಮಾಡುವಾಗ ಕಲಾವಿದರು ಎಚ್ಚರವಹಿಸಬೇಕು. ಅರಿವಿಲ್ಲದೇ ಏನೇನೋ ಮಾತನಾಡಲಾಗದು. ಇದನ್ನು ಇಷ್ಟು ಲಘುವಾಗಿ ಪರಿಗಣಿಸಲಾಗದು ಎಂದಿತು.

