– ಸುನಿಲ್ ನರೈನ್ ಆಲ್ರೌಂಡ್ ಆಟಕ್ಕೆ ಒಲಿದ ಜಯ
– ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ ಕೆಕೆಆರ್
ಚೆನ್ನೈ: ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಶುಕ್ರವಾರ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೊಂದು ಹೀನಾಯ ಸೋಲು ಕಂಡಿತು. ಧೋನಿ ಪಡೆ ವಿರುದ್ಧ ಸುಲಭ ಜಯ ಸಾಧಿಸಿದ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕೇವಲ 16 ರನ್ ಇರುವಾಗಲೇ ಡೆವೋನ್ ಕಾನ್ವೆ, ರಚಿನ್ ರವೀಂದ್ರ ಔಟಾಗಿ ಪೆವಿಲಿಯನ್ ಕಡೆ ಮುಖ ಮಾಡಿದರು. 79 ರನ್ ಹೊತ್ತಿಗೆ 9 ವಿಕೆಟ್ ಕಳೆದುಕೊಂಡು ಚೆನ್ನೈ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಶಿವಂ ದುಬೆ 31, ವಿಜಯ್ ಶಂಕರ್ 29, ರಾಹುಲ್ ತ್ರಿಪಾಠಿ 16 ರನ್ ಗಳಿಸಿ ತಂಡದ ಮೊತ್ತ ಎರಡಂಕಿ ದಾಟಲು ನೆರವಾದರು. ಉಳಿದ ಬ್ಯಾಟರ್ಗಳು ಪಿಚ್ನಲ್ಲಿ ನಿರಾಸೆ ಮೂಡಿಸಿದರು. ಅಂತಿಮವಾಗಿ ಚೆನ್ನೈ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ಗಳು ಚೆನ್ನೈ ಬ್ಯಾಟರ್ಗಳನ್ನು ಚೆಂಡಾಡಿದರು. ಸುನೀಲ್ ನರೈನ್ 3 ವಿಕೆಟ್ ಕಿತ್ತು ಮಿಂಚಿದರು. ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ತಲಾ 2 ಹಾಗೂ ವೈಭವ್ ಅರೋರ, ಮೊಯಿಲ್ ಅಲಿ ತಲಾ 1 ವಿಕೆಟ್ ಪಡೆದರು.
ಚೆನ್ನೈ ನೀಡಿದ ಸಾಧಾರಣ 104 ರನ್ ಗುರಿ ಬೆನ್ನತ್ತಿದ ಕೆಕೆಆರ್ ಕೇವಲ 10.1 ಇರುವಾಗಲೇ ಗುರಿ ತಲುಪಿ ಸುಲಭ ಜಯ ಸಾಧಿಸಿತು.
ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಸುನೀಲ್ ನರೈನ್ ಆಲ್ರೌಂಡ್ ಆಟ ಗಮನ ಸೆಳೆಯಿತು. ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ನರೈನ್ ಅಬ್ಬರಿಸಿದರು. ಕೇವಲ 18 ಬಾಲ್ಗೆ 5 ಸಿಕ್ಸರ್, 2 ಫೋರ್ಗಳೊಂದಿಗೆ 44 ರನ್ ಸಿಡಿಸಿದರು. ಕ್ವಿಂಟನ್ ಡಿಕಾಕ್ 23, ಅಜಿಂಕ್ಯಾ ರಹಾನೆ 20, ರಿಂಕು ಸಿಂಗ್ 15 ರನ್ ಗಳಿಸಿದರು. ಕೊನೆಗೆ ಕೆಕೆಆರ್ 10.1 ಓವರ್ಗೆ 2 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಗೆದ್ದು ಬೀಗಿತು.
ಗಾಯದ ಸಮಸ್ಯೆಯಿಂದ ಐಪಿಎಲ್ ಟೂರ್ನಿಯ 2025ರ ಆವೃತ್ತಿಯಿಂದ ಚೆನ್ನೈ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಹೊರಗಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈ ತಂಡದ ಕ್ಯಾಪ್ಟನ್ ಜವಾಬ್ದಾರಿಯನ್ನು ಧೋನಿ ಮತ್ತೆ ಪಡೆದಿದ್ದಾರೆ.