ನವದೆಹಲಿ: ಪಾಕಿಸ್ತಾನ ಪತ್ರಕರ್ತೆ ವಿಚಾರವಾಗಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಹಾಗೂ ಸುನಂದ ಪುಷ್ಕರ್ ಮಧ್ಯೆ ನಿತ್ಯವೂ ನಡೆಯುತ್ತಿತ್ತು ಎಂದು ದೆಹಲಿ ಪೊಲೀಸರು ಶನಿವಾರ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಸುನಂದ ಪುಷ್ಕರ್ ಸಾವಿನ ಪ್ರಕರಣದ ಕುರಿತು ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಲಯಕ್ಕೆ ಪ್ರಕರಣದ ತನಿಖಾ ವರದಿ ಸಲ್ಲಿಸಿದ ಪೊಲೀಸರು, ಶಶಿ ತರೂರ್ ಹಾಗೂ ಸುನಂದ ಪುಷ್ಕರ್ ಮಧ್ಯೆ ದುಬೈನಲ್ಲಿಯೂ ಜಗಳ ನಡೆದಿತ್ತು. ಇದಕ್ಕೆ ಶಶಿ ತರೂರ್ ಮನೆಯಲ್ಲಿದ್ದ ಸೇವಕಿ ಸಾಕ್ಷಿ. ದಂಪತಿಯ ಜಗಳ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಸುನಂದ ಪುಷ್ಕರ್ ಒಂದು ಬಾರಿ ಪತಿ ತರೂರ್ ಮೇಲೆ ಹಲ್ಲೆ ಮಾಡಿದ್ದರು ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಆರೋಪಿ ಶಶಿ ತರೂರ್ ಅವರ ವಿರುದ್ಧ ಐಪಿಸಿ ಸೆಕ್ಷನ್ 498 ಎ (ಗಂಡ ಅಥವಾ ಆಕೆಯ ಸಂಬಂಧಿಕರು ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು), 306 (ಆತ್ಮಹತ್ಯೆಗೆ ಪ್ರೇರಣೆ) ಅಥವಾ 302 (ಕೊಲೆ) ಈ ಎರಡರಲ್ಲಿ ಯಾವುದರ ಅಡಿ ಪ್ರಕರಣ ದಾಖಲಿಸಿಬೇಕು ಎಂದು ಪೊಲೀಸರು, ತನಿಖಾ ಸಂಸ್ಥೆಯ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರಿಗೆ ಅನುಮತಿ ಕೋರಿದ್ದಾರೆ.
ಪ್ರಕರಣದ ಸಂಬಂಧ ಕೋರ್ಟ್ ಗೆ ಮಾಹಿತಿ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು, ದುಬೈನಿಂದ ವಾಪಸ್ಸಾದ ಬಳಿಕ ಪಾಕ್ ಪರ್ತಕರ್ತೆ ಮೆಹರ್ ತಹಾರ್ ವಿಚಾರವಾಗಿ ದಂಪತಿ ಜಗಳವಾಡಿದ್ದರು. ಇದೇ ವೇಳೆ ಸುನಂದ ಅವರು ಐಪಿಎಲ್ಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದರು. ಇದಾದ ಬಳಿಕ ಅವರು ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಸುನಂದ ಅವರಿಗೆ ಪ್ರಾಣಕ್ಕೆ ಕುತ್ತು ತರುವ ಇಂಜೆಕ್ಷನ್ ಚುಚ್ಚಿರುವ ಅನುಮಾನವಿದೆ ಎಂದು ಕೋರ್ಟ್ ಗೆ ತಿಳಿಸಿದ್ದಾರೆ.
ಪತಿಯ ಜೊತೆಗೆ ಉಂಟಾದ ಜಗಳದ ಬಗ್ಗೆ ಸುನಂದ ಪುಷ್ಕರ್ ಸ್ನೇಹಿತೆಯೊಂದಿಗೆ ಹಂಚಿಕೊಂಡಿದ್ದರು. ನಾನು ಬದುಕಿರಲು ಸಾಧ್ಯವಿಲ್ಲ, ಸಾಯುತ್ತೇನೆ ಎಂದು ಸುನಂದ ಹೇಳಿಕೊಂಡಿದ್ದರು. ಅವರ ಇ-ಮೇಲ್ಗಳನ್ನು ಪರಿಶೀಲನೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಅತುಲ್ ಶ್ರೀವಾಸ್ತವ ಹೇಳಿದ್ದಾರೆ.
ಶಶಿ ತರೂರ್ ಅವರ ಪರ ವಕೀಲ ವಿಕಾಸ್ ಪಹ್ವಾ ಅವರು ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಆರೋಪಗಳು ಸುಳ್ಳು. ಈ ಪ್ರಕರಣದ ಸಂಬಂಧ ತಜ್ಞರು ನೀಡಿರುವ ಓದಬೇಕು ಎಂದು ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.
ವಾದ, ಪ್ರತಿವಾದವನ್ನು ಆಲಿಸಿದ ತನಿಖಾ ಸಂಸ್ಥೆಯ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರು ಪ್ರರಕಣದ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿದ್ದಾರೆ.