ಮಂಡ್ಯ: ಕಳೆದ ಲೋಕಸಭಾ ಚುನಾವಣೆ ವೇಳೆಯಿಂದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹಾಗೂ ಜೆಡಿಎಸ್ (JDS) ನಾಯಕರ ನಡುವಿನ ಸಮರ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಮಂಡ್ಯದಲ್ಲಿ (Mandya) ದಳಪತಿಗಳ ಕೋಟೆಯನ್ನು ಛಿದ್ರ ಮಾಡಿ ಬಿಜೆಪಿ ಸಾರ್ವಭೌಮತ್ವ ಸ್ಥಾಪಿಸಬೇಕೆಂದು ರೆಬಲ್ ಲೇಡಿ ಪಣತೊಟ್ಟಂತೆ ಕಾಣುತ್ತಿದ್ದು, ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಧುಮುಕಿ ಜೆಡಿಎಸ್ ವಿರುದ್ಧ ರಣಕಹಳೆ ಊದಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ರಾಷ್ಟ್ರ ರಾಜಕೀಯಕ್ಕೆ ಗುಡ್ ಬಾಯ್ ಹೇಳಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದ್ದವು. ಈ ಮಾತುಗಳಿಗೆ ಸುಮಲತಾ ಅಂಬರೀಶ್ ಕಡ್ಡಿ ತುಂಡರಿಸಿದ ಹಾಗೆ ನಾನು ರಾಜ್ಯ ರಾಜಕೀಯಕ್ಕೆ ಬರಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಂದರ್ಭಕ್ಕೆ ತಕ್ಕ ಹಾಗೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಮಾತಿನ ಹಿಂದೆ ರೆಬೆಲ್ ಲೇಡಿ ದಳಪತಿಗಳ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಸಾರ್ವಭೌಮತ್ವ ಸ್ಥಾಪನೆ ಮಾಡುವ ಲೆಕ್ಕಾಚಾರವಿದೆ. ಇದೇ ತಿಂಗಳ 17ರಂದು ಬಿಜೆಪಿ (BJP) ಪಕ್ಷಕ್ಕೆ ಬೆಂಬಲ ಸೂಚಿಸಿದ ಸುಮಲತಾ ಅಂಬರೀಶ್ ಅಂದಿನಿಂದ ಮಂಡ್ಯ ಜಿಲ್ಲೆಯ ಚುನಾವಣೆಯ ಅಖಾಡದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ: ನಾಯಕರ ಹಠಮಾರಿತನ- ಬಿಜೆಪಿ ಕಾರ್ಯಕರ್ತರ ನಡುವೆಯೇ ಡಿಶುಂ ಡಿಶುಂ!
ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಸೂಚನೆ ನೀಡಿದ ದಿನದಿಂದ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಬಿಜೆಪಿಯ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳನ್ನು ಭೇಟಿ ಮಾಡಿ ಚುನಾವಣೆಯ (Election) ರಣತಂತ್ರದ ಬಗ್ಗೆ ಚರ್ಚೆಯನ್ನು ಮಾಡಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ರಾಮಪಾದ ಊರಿದ ಏರಿಯಾ ಪಾದರಾಯನಪುರದಲ್ಲಿ ರಾಮ ನವಮಿ ಸಂಭ್ರಮ
ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮೂಲಕ ಮೊದಲ ಬಾರಿಗೆ ಜೆಡಿಎಸ್ ಭದ್ರಕೋಟೆ ಒಡೆದಿದೆ. ಇದಾದ ಬಳಿಕ ಕೆಆರ್ಪೇಟೆ ಉಪಚುನಾವಣೆಯಲ್ಲಿ ಕಮಲ ಅರಳುವ ಮೂಲಕ ಮತ್ತೊಮ್ಮೆ ಜೆಡಿಎಸ್ಗೆ ಪೆಟ್ಟು ನೀಡಲಾಗಿದೆ. ಇದೀಗ ಮಗದೊಮ್ಮೆ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಸದಾವಕಾಶ ಒದಗಿ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆದು ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಬೇಕು. ಇದು ತಾಲೂಕಾದ ಮದ್ದೂರಿನಿಂದಲೇ (Maddur) ಪ್ರಾರಂಭವಾಗಲಿ. ಇದು ನಿಮ್ಮಿಂದ ಸಾಧ್ಯ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ತಮ್ಮ ಅಭಿಮಾನಿಗಳಿಗೆ ಹೇಳುವ ಮೂಲಕ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಕಿಚ್ಚನ್ನು ಹಚ್ಚಿದ್ದಾರೆ. ಇದನ್ನೂ ಓದಿ: ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿ – ಮೂವರು ಮಕ್ಕಳು ಸೇರಿ 6 ಜನ ಸಾವು
ಒಟ್ಟಾರೆ ದಳಪತಿಗಳ ಮೇಲೆ ರೆಬೆಲ್ ಲೇಡಿಗಿರುವ ಕಿಡಿ ಸ್ವಲ್ಪವೂ ಆರಿದಂತೆ ಕಾಣುತ್ತಿಲ್ಲ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ಗೆ ಎಷ್ಟರ ಮಟ್ಟಿಗೆ ಮಣೆ ಹಾಕುತ್ತಾರೆ ಎನ್ನುವುದನ್ನು ಚುನಾವಣೆಯ ಫಲಿತಾಂಶದ ಬಳಿಕ ನೋಡಬೇಕಿದೆ. ಇದನ್ನೂ ಓದಿ: ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪತಿ!