ಮಾಜಿ ಸಂಸದೆ, ನಟಿ ಸುಮಲತಾ (Sumalatha) ಅವರು ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ಅವರ ಅಂತಿಮ ದರ್ಶನ ಪಡೆದಿದ್ದಾರೆ. ನಮನ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಎಸ್.ಎಂ ಕೃಷ್ಣರವರು ಡಿಗ್ನಿಫೈಡ್ ರಾಜಕಾರಣಿ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಅಣ್ಣಾವ್ರ ಅಪಹರಣದ ಸಂದರ್ಭ ಹೇಗಿತ್ತು?: ಎಸ್ಎಂ ಕೃಷ್ಣ ಸಹಾಯ ನೆನೆದ ಶಿವಣ್ಣ
ಸುಮಲತಾ ಮಾತನಾಡಿ, ನಮ್ಮ ಕರ್ನಾಟಕ ಕಂಡಂತಹ ಅತ್ಯಂತ ಶ್ರೇಷ್ಠ ರಾಜಕಾರಣಿ ಆಗಿದ್ದರು. ರಾಜ್ಯದ ರಾಜಕಾರಣದಲ್ಲಿ ಸಭ್ಯತೆ, ಸಂಸ್ಕಾರ ಕಲಿಸಿದವರು. ಮಂಡ್ಯದ ಹೆಮ್ಮೆಯ ಸುಪುತ್ರ ಆಗಿದ್ದರು. ಎಸ್.ಎಂ ಕೃಷ್ಣರವರು ಡಿಗ್ನಿಫೈಡ್ ರಾಜಕಾರಣಿ ಆಗಿದ್ದರು. ಇನ್ನೂ ಎಂದೂ ಇಂತಹ ರಾಜಕೀಯ ವ್ಯಕ್ತಿಯನ್ನು ನೋಡಲು ಆಗೋದಿಲ್ಲ.
ಬೆಂಗಳೂರು ನಂ.1 ಅನ್ನುವ ಹೆಸರು ಗಳಿಸಲು ಅವರು ಮಾಡಿದ್ದ ಕೀರ್ತಿ ಅಪಾರವಾಗಿತ್ತು. ಆಧುನಿಕರಣ ಜನಪರ ಕಾಳಜಿ ಎಂದಿಗೂ ಮರೆಯಬಾರದು. ಎಸ್ಎಂಕೆ ರಾಜ್ಯಕ್ಕೆ ಘನತೆ, ಗೌರವ ತಂದು ಕೊಟ್ಟವರು.ಅಂದು ಅಂಬರೀಶ್ ಅವರನ್ನ ಮತ್ತೆ ಕಾಂಗ್ರೆಸ್ ಕರೆತಂದದ್ದು ಕೃಷ್ಣರವರೇ. ನಾನು ಕೂಡ ಮೊದಲು ಅವರ ಅಶೀರ್ವಾದ ಪಡೆದು ನಂತರ ರಾಜಕೀಯಕ್ಕೆ ಬಂದೆ ಎಂದರು. ನಮ್ಮ ರಾಜ್ಯದಲ್ಲಿ ಡಿಗ್ನಿಫೈಡ್ ರಾಜಕಾರಣವನ್ನು ತೂಗಿಸಿಕೊಂಡು ಬಂದಿದ್ದಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ ಎಂದು ಎಸ್.ಎಂ ಕೃಷ್ಣರನ್ನು ಸುಮಲತಾ ಕೊಂಡಾಡಿದ್ದಾರೆ.
ಇನ್ನೂ ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ (92) ಅವರು ಮಂಗಳವಾರ ಬೆಳಗ್ಗೆ 3:30ಕ್ಕೆ ವಿಧಿವಶರಾಗಿದ್ದಾರೆ.