ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಪ್ರತಿದಿನವೂ ಜಿಲ್ಲೆಯ ಅನೇಕ ಗ್ರಾಮಗಳಿಗೆ ಹೋಗಿ ಮತ ಪ್ರಚಾರ ಮಾಡುತ್ತಾರೆ. ಆದರೆ ಮಂಡ್ಯದಲ್ಲಿ ಪ್ರಚಾರ ಮಾಡಿ ಬಳಿಕ ಮೈಸೂರಿನಲ್ಲಿ ಉಳಿದುಕೊಳ್ಳುತ್ತಿದ್ದಾರೆ.
ಸುಮಲತಾ ಅವರು ಮಂಡ್ಯದಲ್ಲಿ ಪ್ರಚಾರ ಮುಗಿಸಿದ ಬಳಿಕ ದಿನಾಲೂ ಮೈಸೂರಿಗೆ ಹೋಗಿ ವಾಸ್ತವ್ಯ ಹೂಡುತ್ತಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಸುಮಲತಾ ಅವರು ಅಂಬರೀಶ್ ಬಾಡಿಗೆ ಪಡೆದಿದ್ದ ಅದೃಷ್ಟದ ಮನೆಯನ್ನೇ ಮಂಡ್ಯದಲ್ಲಿ ಬಾಡಿಗೆ ಪಡೆದಿದ್ದರು. ಆದರೆ ಬಾಡಿಗೆ ಪಡೆದ ಮನೆಯಲ್ಲಿ ಉಳಿದುಕೊಳ್ಳದೆ ಮೈಸೂರಿಗೆ ಹೋಗುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸುಮಲತಾ, ಚನ್ನಪಟ್ಟಣ, ರಾಮನಗದಲ್ಲಿ ಗೆದ್ದಂತಹ ನಾಯಕರು ಎಲ್ಲಿ ರಾಮನಗರ ಮತ್ತು ಚನ್ನಪಟ್ಟದಲ್ಲಿ ಮನೆ ಮಾಡಿದ್ದಾರೆ. ದಿನವೂ ಬೆಂಗಳೂರಿನಿಂದ ಓಡಾಡುತ್ತಿದ್ದಾರೆ. ಹೀಗಾಗಿ ಅವರನ್ನೇ ಕೇಳಿ ಎಂದು ಕೋಪಗೊಂಡು ಉತ್ತರಿಸಿದ್ರು.
2013ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ನಗರದ 3ನೇ ಕ್ರಾಸ್ ನಲ್ಲಿರುವ ಮನೆಯನ್ನು ಅಂಬರೀಶ್ ಬಾಡಿಗೆ ಪಡೆದಿದ್ದರು. ಸತತ ಎರಡು ಸೋಲಿನ ಬಳಿಕ ಅಂಬಿಗೆ ಈ ಲಕ್ಕಿ ಮನೆ ಗೆಲುವು ತಂದುಕೊಟ್ಟಿತ್ತು. 2008ರ ವಿಧಾನಸಭೆ, 2009ರ ಲೋಕಸಭೆ ಚುನಾವಣೆಯಲ್ಲಿ ಅಂಬಿ ಸೋತಿದ್ದರು. 2013ರ ವಿಧಾನಸಭಾ ಚುನಾವಣೆಗೂ ಮುನ್ನ ಅಂಬಿ ಈ ಮನೆ ಬಾಡಿಗೆಗೆ ಪಡೆದಿದ್ದರು. ಮನೆಗೆ ಬಂದ ಬಳಿಕ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದರು.