ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವೇರುತ್ತಿದೆ. ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ನಾಯಕರು ಟಿಕೆಟ್ ಹಂಚಿಕೆ, ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸುಮಲತಾ ಅಂಬರೀಶ್ ಅವರು ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅವರನ್ನು ಭೇಟಿಯಾಗುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ.
ಸುಮಲತಾ ಅವರು ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಎಸ್ಎಂಕೆ ನಿವಾಸಕ್ಕೆ ಭೇಟಿ ಮಾಡಿ ಕೃಷ್ಣ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಇದೀಗ ಸುಮಲತಾಗೆ ಮಾಜಿ ಮುಖ್ಯಮಂತ್ರಿ ಬೆಂಬಲ ಕೊಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಸುಮಲತಾ, ಮಂಡ್ಯ ಲೋಕಸಭಾ ಕ್ಷೇತ್ರದ ಸಂಭಾವ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಕೃಷ್ಣ ಅವರನ್ನು ಭೇಟಿ ಮಾಡಿ, ಮಂಡ್ಯ ಚುನಾವಣೆಯಲ್ಲಿ ತನಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂಬರೀಶ್ ಅವರನ್ನು ಕಾಂಗ್ರೆಸ್ ಗೆ ಕರೆತರುವಲ್ಲಿ ನಾನು ಕೂಡ ಒಬ್ಬನಾಗಿದ್ದೆ. ಆದ್ರೆ ಆ ಬಳಿಕ ಅವರ ದಾರಿ ಬೇರೆಯಾಗಿತ್ತು ಎಂದು ಈ ಹಿಂದೆ ಕೃಷ್ಣ ಅವರು ಹೇಳಿದ್ದರು. ಹೀಗಾಗಿ ಇಂದಿನ ಭೇಟಿಯಲ್ಲಿ ಸುಮಲತಾ ಅವರನ್ನು ಮನವೊಲಿಸುತ್ತಾರಾ ಅಥವಾ ಪಕ್ಷೇತರವಾಗಿ ನಿಂತಾಗ ಅವರಿಗೆ ಬೆಂಬಲ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಇನ್ನೂ ಕೂಡ ಯಾವುದೇ ನಿರ್ಧಾರ ಮಾಡಿಲ್ಲ. ಇತ್ತ ಇನ್ನೆರಡು ದಿನಗಳಲ್ಲಿ ಮಂಡ್ಯಕ್ಕೆ ಸಂಬಂಧಿಸಿದಂತೆ ನನ್ನ ನಿಲುವನ್ನು ಹೇಳುತ್ತೇನೆ ಎಂದು ಎಸ್ಎಂಕೆ ಹೇಳಿದ್ದು, ಇಂದು ಸಂಜೆ ಅವರ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
ಮಂಡ್ಯದ ರಾಜಕೀಯ ತಂತ್ರವನ್ನು ಎಸ್ ಎಂ ಕೃಷ್ಣ ಬಲ್ಲವರಾಗಿದ್ದಾರೆ. ಸುಮಲತಾ ಮಾರ್ಚ್ 18ರಂದು ಪಕ್ಷೇತರವಾಗಿ ಕಣಕ್ಕೆ ಇಳಿಯುತ್ತಾರಾ ಇಲ್ವಾ ಎಂಬುದರ ಬಗ್ಗೆ ತಿಳಿಯಬೇಕಷ್ಟೆ. ಆದ್ರೆ ಈ ಬೆನ್ನಲ್ಲೇ ಇದೀಗ ಎಸ್.ಎಂಕೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕುತೂಹಲಕ್ಕೀಡು ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv