ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿದಿರುವ ಹಿನ್ನೆಲೆ ಅವರ ಬೆಂಬಲಿಗರಿಗೆ ನಿತ್ಯವೂ ಬೆದರಿಕೆ ಕರೆ ಬರುತ್ತಿದೆ. ಅಲ್ಲದೇ ತಮ್ಮ ಒಂಟಿ ಹೋರಾಟಕ್ಕೆ ಬೆಂಬಲಬೇಕು ಅಂತ ಬಿಜೆಪಿ ನಾಯಕರ ಬೆಂಬಲ ಕೇಳಲು ಸುಮಲತಾ ಮುಂದಾಗಿದ್ದಾರೆ.
ಇಂದು ನಗರದ ಭಾರತಿನಗರ ವ್ಯಾಪ್ತಿಯಲ್ಲಿ ಮತಯಾಚಿಸುವಾಗ ಸುಮಲತಾ ಈ ಹೇಳಿಕೆಯನ್ನು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಟ್ರೈಟ್ ಫಾರ್ವಡ್ ಫೈಟ್ ಆದ್ರೆ ಯಾವ ಭಯವಿಲ್ಲ. ಅದನ್ನ ನಾನು ಗೆಲ್ಲಬಹುದು ಅನ್ನೋ ನಂಬಿಕೆಯಿದೆ. ಆದ್ರೆ ಹಿಂದಿನಿಂದ ಚುಚ್ಚುವ ಪ್ರಯತ್ನ ಆಗುತ್ತಿದೆ. ಯುದ್ಧದಲ್ಲೂ ಒಂದು ಧರ್ಮವಿದೆ. ಧರ್ಮ ಪಾಲನೆ ಬಿಟ್ಟು ಬೆನ್ನಿಗೆ ಚೂರಿ ಹಾಕ್ತಿದ್ದಾರೆ ಅನಿಸುತ್ತಿದೆ. ನನಗಿರುವ ಜನ ಬೆಂಬಲ ನೋಡಿ, ಕೆಬಲ್, ಕರೆಂಟ್ ಕಡಿತ ಮಾಡ್ತಾರೆ. ಇದು ಸರಿನಾ? ನೀವು ಜನರನ್ನ ಸೇರಿಸಿ, ನೀವು ಪ್ರಚಾರ ಮಾಡಿ. ಅದನ್ನ ತಡೆಯೋಲ್ಲ. ನಾವು ಖುಷಿಪಡುತ್ತೀವಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಉದ್ದೇಶಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಿದ್ದಾರೆ: ಸುಮಲತಾ
ಅಷ್ಟೇ ಅಲ್ಲದೆ, ನನ್ನ ಒಂಟಿ ಹೋರಾಟಕ್ಕೆ ಎಲ್ಲರ ಬೆಂಬಲ ಬೇಕು. ಈ ಬಗ್ಗೆ ಬಿಜೆಪಿ ನಾಯಕರ ಬೆಂಬಲ ಕೇಳುತ್ತೇನೆ. ಬಿಜೆಪಿ ಬೆಂಬಲ ಕೊಟ್ಟರೆ ಮತ್ತಷ್ಟು ಧೈರ್ಯ ಸಿಗುತ್ತೆ. ಹೀಗಾಗಿ ನಾನು ಬಿಜೆಪಿ ನಾಯಕರನ್ನ ಭೇಟಿ ಮಾಡುತ್ತೇನೆ ಎಂದು ಸುಮಲತಾ ತಿಳಿಸಿದ್ದಾರೆ.
ದಿನ ಕಳೆದಂತೆ ಮಂಡ್ಯ ಚುನಾವಣಾ ಕಣ ರಂಗೇರುತ್ತಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದರೆ, ಇತ್ತ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅವರು ಕಣಕಿಳಿದಿದ್ದಾರೆ. ಇಬ್ಬರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ನಡುವೆ ಸುಮಲತಾ ಪರ ನಿಂತ ಕೆಲವು ಕಾಂಗ್ರೆಸ್ ನಾಯಕರನ್ನು ಪಕ್ಷ ಉಚ್ಚಾಟನೆ ಮಾಡಿದೆ.