ಮಂಡ್ಯ: ಜೆಡಿಎಸ್ (JDS) ಭದ್ರ ಕೋಟೆಯಾಗಿರುವ ಸಕ್ಕರೆ ನಾಡು ಮಂಡ್ಯ (mandya) ಜಿಲ್ಲೆಯನ್ನು ಭೇದಿಸಲು ಬಿಜೆಪಿ (BJP) ರಣತಂತ್ರವೊಂದನ್ನು ಹೆಣೆಯುತ್ತಿದ್ದು, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಆಪ್ತರನ್ನು ತಮ್ಮತ್ತ ಸೆಳೆದು ವಿಧಾನಸಭಾ ಚುನಾವಣೆಯ (Assembly polls) ಅಖಾಡಕ್ಕೆ ಧುಮುಕಿಸಲು ಸಜ್ಜಾಗಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಅಕ್ಷರಶಃ ರಣರಂಗವಾಗಿ ಬದಲಾಗಿತ್ತು. ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ನ ಕೆಲ ನಾಯಕರು ಹಿಂಭಾಗಿಲಿನಿಂದ ಸಪೋರ್ಟ್ ಮಾಡಿದ್ರು ಸಹ, ರೆಬಲ್ ಸ್ಟಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಂಡುವಾಳು ಸಚ್ಚಿದಾನಂದ (Induvalu Sachidananda) ಅವರ ಸಪೋರ್ಟ್ ಸುಮಲತಾ ಅವರಿಗೆ ನೂರು ಆನೆಯ ಬಲ ನೀಡಿತ್ತು. ಆ ವೇಳೆ ಸಚ್ಚಿದಾನಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ರು, ಅಂದು ಮೈತ್ರಿ ಸರ್ಕಾರದ ಒಪ್ಪಂದದ ಪ್ರಕಾರ ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ಗೆ ಬೆಂಬಲ ನೀಡಬೇಕಾಗಿತ್ತು. ಆದ್ರೆ ಕೆಲ ಕಾಂಗ್ರೆಸ್ ನಾಯಕರು ಹಿಂಬಾಗಿಲಿನಿಂದ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ರು. ಆದ್ರೆ ಇಂಡುವಾಳು ಸಚ್ಚಿದಾನಂದ ಸುಮಲತಾ ಅಂಬರೀಶ್ ಅವರ ಮನೆ ಬಾಗಿಲಿಗೆ ಹೋಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಕೇಳಿಕೊಂಡಿದ್ದಲ್ಲದೇ ಸುಮಲತಾ ಅವರು ಭರ್ಜರಿ ಗೆಲುವು ಸಾಧಿಸುವರೆಗೂ ಸಚ್ಚಿದಾನಂದ ಅವರು ಸುಮಲತಾ ಜೊತೆಗೆ ಇದ್ರು. ಇದೀಗ ಸುಮಲತಾ ಅವರ ಆಪ್ತರಾಗಿರುವ ಸಚ್ಚಿದಾನಂದ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ, 20 ಲಕ್ಷ ಉದ್ಯೋಗ ಸೃಷ್ಟಿ – ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರವಸೆ
ಈಗಾಗಲೇ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿರುವ ಸಚ್ಚಿದಾನಂದ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಅಖಾಡಕ್ಕೆ ಧುಮುಕಿಸಲು ಬಿಜೆಪಿ ಪ್ಲಾನ್ ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಸಚ್ಚಿದಾನಂದ ಅವರು ನ.28ಕ್ಕೆ ಬೆಂಗಳೂರಿನ (Bengaluru) ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಹಿನ್ನೆಲೆ ಶ್ರೀರಂಗಪಟ್ಟಣ ಕ್ಷೇತ್ರದ ಜನರು ಹಾಗೂ ತಮ್ಮ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಲು ಸಭೆಯನ್ನು ಸಹ ಸಚ್ಚಿದಾನಂದ ನಡೆಸಿದ್ದಾರೆ. ನ.28 ರಂದು ಸಚ್ಚಿದಾನಂದ 1,000 ಮಂದಿ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಪಾಪದ ಹುಡುಗಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದ ಸಾಹಿತಿ ಗುರುರಾಜ ಕೊಡ್ಕಣಿ
ಸಚ್ಚಿದಾನಂದ ಅವರು ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ ಸುಮಲತಾ ಅವರು ಬೆಂಬಲ ಕೊಡುತ್ತಾರ ಎಂಬ ಪ್ರಶ್ನೆ ಸಹ ಎದ್ದಿದೆ. ಈ ಹಿಂದೆ ಸ್ವತಃ ಸುಮಲತಾ ಅವರೇ ಮುಂದಿನ ಚುನಾವಣೆಯಲ್ಲಿ ಸಚ್ಚಿದಾನಂದ ಯಾವ ಪಕ್ಷದಿಂದ ಸ್ಪರ್ಧೆ ಮಾಡಿದ್ರು ನಾನು ಸಪೋರ್ಟ್ ಮಾಡುತ್ತೇನೆ ಎಂದಿದ್ರು. ಈ ಹಿನ್ನೆಲೆ ಸುಮಲತಾ ಅಂಬರೀಶ್ ಅವರ ಆಶೀರ್ವಾದ ಪಡೆದೆ ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಅವರ ಸೇರ್ಪಡೆಯನ್ನು ಅವರು ತೀರ್ಮಾನ ಮಾಡುತ್ತಾರೆ. ಈಗ ನಾನು ಮಾತ್ರ ಸೇರ್ಪಡೆಯಾಗುತ್ತಿದ್ದೇನೆ. ಅವರ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತೆ ಎಂದು ಸಚ್ಚಿದಾನಂದ ತಿಳಿಸಿದ್ದಾರೆ.
ಒಟ್ಟಾರೆ ಶತಾಯ ಗತಯಾ ಮಂಡ್ಯ ಜಿಲ್ಲೆಯಲ್ಲಿ ಕಮಲವನ್ನು ಇನ್ನಷ್ಟು ಕ್ಷೇತ್ರಗಳಲ್ಲಿ ಅರಳಿಸಬೇಕೆಂದು ಕೊಂಡಿರುವ ಬಿಜೆಪಿಗೆ ಇಂಡುವಾಳು ಸಚ್ಚಿದಾನಂದ ಬ್ರಹ್ಮಾಸ್ತ್ರವಾಗಿ ಸಿಕ್ಕಿದ್ದಾರೆ. ಮುಂದೆ ಬಿಜೆಪಿಯಲ್ಲಿ ಸಚ್ಚಿದಾನಂದ ಮಂಡ್ಯದಲ್ಲಿ ಎಷ್ಟರಮಟ್ಟಿಗೆ ಕಮಾಲ್ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.