ಮಂಡ್ಯ: ಬಹಿರಂಗ ಸಭೆಗೆ ಬನ್ನಿ ಮಾತನಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹಾಕಿದ್ದ ಸವಾಲನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸ್ವೀಕರಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ಜನರ ಸಮಸ್ಯೆಯನ್ನು ಕೇಳಿ ಅದರ ಬಗ್ಗೆ ಮತನಾಡಿ ಎಂದು ನಾನೇ ಹೇಳಿದ್ದೆ ಎಂದರು. ಇದೇ ವೇಳೆ ಅಭಿವೃದ್ಧಿ ಬಗ್ಗೆ ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದಾರೆ.
ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು, ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದರು. ಇದಕ್ಕೆ Any time, any where..I am ready ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದಾರೆ.
ನ್ಯಾಯಯುತ ಚುನವಾಣೆ ನಡೆಯಬೇಕು ಎಂದರೆ ಡಿಸಿ ವರ್ಗಾವಣೆ ಆಗಬೇಕು ಎಂದು ಮಂಡ್ಯ ಡಿಸಿ ಬಗ್ಗೆ ಮೊದಲೇ ದೂರು ನೀಡಿದ್ದೇವು. ಇದೀಗ ನ್ಯಾಯ ಸಿಕ್ಕಿದೆ. ಈಗ ಸಮಾಧಾನವಾಗಿದೆ ಎಂದು ಡಿಸಿ ವರ್ಗಾವಣೆ ಬಗ್ಗೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳು 90% ಕನ್ಫರ್ಮ್ ಇಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್ನುವುದಕ್ಕಿಂತ ಕಾಂಗ್ರೆಸ್, ರಾಜ್ಯ ರೈತ ಸಂಘದ ಜನರು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ನನ್ನ ಬೆಂಬಲಕ್ಕೆ ಇದ್ದಾರೆ. ಅಂಬರೀಶ್ ಅವರು ಪಕ್ಷತೀತವಾಗಿ ಇದ್ದರು. ಹೀಗಾಗಿ ನಾನು ಬಿಜೆಪಿ ಅಭ್ಯರ್ಥಿಯಲ್ಲ. ಬಿಜೆಪಿಗೆ ಸೇರೋದು ಇಲ್ಲ ಎಂದು ಸುಮಲತಾ ಅವರು ಸ್ಪಷ್ಟಪಡಿಸಿದರು.