ಚಾಮರಾಜನಗರ: ಸುಳ್ವಾಡಿ ದುರಂತದ ಕ್ರಿಮಿ ಇಮ್ಮಡಿ ಮಹದೇವ ಸ್ವಾಮೀಜಿ ಜೈಲಿನಲ್ಲಿ ಇದ್ದುಕೊಂಡು ದರ್ಬಾರ್ ನಡೆಸುತ್ತಿದ್ದಾನೆ. ಈತನ ಪ್ಲಾನ್ಗೆ ಜೈಲಾಧಿಕಾರಿಗಳು ಫುಲ್ ಸಪೋರ್ಟ್ ಮಾಡಿದ್ದಾರೆ.
ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಸುಳ್ವಾಡಿ ವಿಷಪ್ರಸಾದ ದುರಂತ ನಡೆದು 5 ತಿಂಗಳಾಯಿತು. ಚಾಮರಾಜನಗರ ಜಿಲ್ಲೆಯಲ್ಲಿರುವ ಸುಳ್ವಾಡಿ ಮಾರಮ್ಮ ದೇವಸ್ಥಾನದ ಆಡಳಿತದ ಚುಕ್ಕಾಣಿ ಹಿಡಿಯಲು ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ಇತರ ಮೂವರು ಸೇರಿ ಮಾಡಿದ ಪಿತೂರಿಗೆ 17 ಮಂದಿ ಬಲಿಯಾಗಿ 112 ಮಂದಿ ಅಸ್ವಸ್ಥರಾಗಿದ್ದರು. ವಿಷವಿಕ್ಕಿದ ಪಾಪಿಗಳು ಜೈಲಲ್ಲಿದ್ದಾರೆ. ಆದರೆ ಇಮ್ಮಡಿ ಮಹದೇವಸ್ವಾಮಿ ಮಾತ್ರ ಜೈಲಿನಲ್ಲಿ ಇದ್ದುಕೊಂಡೇ ಸಾಲೂರು ಮಠದ ಆಸ್ತಿಯನ್ನು ತನ್ನ ವೈಯಕ್ತಿಕ ಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
1997ರಲ್ಲಿ ಇಮ್ಮಡಿ ಮಹದೇವಸ್ವಾಮಿ, ಕಾರ್ಯದರ್ಶಿ, ಮಲೆಮಹದೇಶ್ವರ ಕೃಪ ವಿದ್ಯಾಸಂಸ್ಥೆ ಹೆಸರಲ್ಲಿ ಲಿಂಗಣಾಪುರ ಎಂಬಲ್ಲಿ 2 ಎಕರೆ 44 ಸೆಂಟ್ಸ್ ಜಮೀನನ್ನು ಖರೀದಿಸಿದ್ದನು. ಆದರೆ ಈಗ ಈತ ಜೈಲಿಂದ ಹೇಗಾದ್ರೂ ಹೊರಬರಲು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಈ ಆಸ್ತಿಯನ್ನು ಮಾರಾಟ ಮಾಡಲು ಇದೇ ಮೇ 3ರಂದು ತನ್ನ ಸ್ವಂತ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.
2018ರ ಫೆಬ್ರವರಿ 20 ರಂದು ಖಾತೆ ಮಾಡಿಕೊಡಲು ಇಮ್ಮಡಿ ಮಹದೇವಸ್ವಾಮೀಜಿ ಅರ್ಜಿ ಸಲ್ಲಿಸಿದ್ದ. ಅರ್ಜಿ ಕೊಟ್ಟ ಒಂದು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಆದರೆ 1 ವರ್ಷವಾದ್ರೂ ಅರ್ಜಿಯ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳು ಇದ್ದಕ್ಕಿದ್ದಂತೆ 2 ವಾರಗಳ ಹಿಂದೆ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಖಾತೆ ಮಾಡಿಕೊಟ್ಟಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.