ಪ್ರೀತಿಸಲು ಒಪ್ಪದ ಬಾಲಕಿ ಕೊಂದಿದ್ದವನಿಂದ ಆತ್ಮಹತ್ಯೆ ಯತ್ನ- ಸಾಯಲು ಬಿಡಿ ಎಂದು ಡ್ರಾಮಾ

Public TV
1 Min Read
KOLAR YOUTH

ಕೋಲಾರ: 9 ನೇ ತರಗತಿ ವಿದ್ಯಾರ್ಥಿನಿಯನ್ನ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದ ಯುವಕ ಮತ್ತೆ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅನುಗೊಂಡಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನ ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ನಿತಿನ್ ಇಂದು ಮತ್ತೆ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇತ್ತೀಚೆಗೆ ಅಂದ್ರೆ ಇದೇ ತಿಂಗಳ 7 ರಂದು ಅಪ್ರಾಪ್ತ ಬಾಲಕಿಯನ್ನ ಹೊಸಕೋಟೆ ತಾಲೂಕಿನ ಬಾಣರಹಳ್ಳಿ ಬಳಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಬಳಿಕ ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದ. ಆದರೆ ಕುತ್ತಿಗೆಗೆ ಸರ್ಜರಿ ಮಾಡಿ ಇನ್ನೇನು ಚೇತರಿಸಿಕೊಳ್ಳುತ್ತಿದ್ದ ನಿತಿನ್ ಇಂದು ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕೋಲಾರ ನಗರದ ಹೊರ ವಲಯದಲ್ಲಿರುವ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕು ದೊಮ್ಮಲೂರು ಗ್ರಾಮದ ನಿವಾಸಿ ನಿತಿನ್ ಆಗಿದ್ದಾನೆ. ತನ್ನ ಪ್ರಿಯತಮೆ ನಂದಿತಾಳನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿರುವ ಯುವಕ ಪ್ರಿಯತಮೆಯನ್ನ ಕೊಂದು ಮಾನಸಿಕವಾಗಿ ಕುಗ್ಗಿದ್ದು, ಹೀಗೆ ಮನಬಂದಂತೆ ವರ್ತಿಸುತ್ತಿದ್ದ ನಿತಿನ್ ಮತ್ತೆ ಆತ್ಮಹತ್ಯೆ ನಿರ್ಧಾರ ಮಾಡಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಏರಿ ವ್ಯಕ್ತಿ ಹುಚ್ಚಾಟ- ಬಿರಿಯಾನಿ ಆಫರ್ ನೀಡಿ ರಕ್ಷಿಸಿದ ಪೊಲೀಸರು

ಇಂದು ಬೆಳಗ್ಗೆ ಆಸ್ಪತ್ರೆಯ ಕಾರಿಡಾರ್ ನಲ್ಲಿ ವಾಕಿಂಗ್ ಮಾಡಲು ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಇನ್ನೂ ತೀವ್ರವಾಗಿ ಗಾಯಗೊಂಡ ಯುವಕ ನಿತಿನ್ ನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಕೋಲಾರ ಗಲ್‍ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Share This Article