ಬಾಗಲಕೋಟೆ: ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅಂತಾರೆ ಅದೇ ರೀತಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಮಧ್ಯದ ಹಗ್ಗಜಗ್ಗಾಟದಲ್ಲಿ ಕಬ್ಬು ಕಟಾವ್ ಮಾಡುವ ಕೂಲಿ ಕಾರ್ಮಿಕರು ಬಡವಾಗಿದ್ದಾರೆ. ದೂರದೂರಿನಿಂದ ಕೂಲಿಯರಸಿ ಹೊಟ್ಟೆಪಾಡಿಗಾಗಿ ಬಂದವರು ಈಗ ಹೊಟ್ಟೆಗೆ ತಣ್ಣೀರಿನ ಪಟ್ಟಿ ಕಟ್ಟಿಕೊಳ್ಳುವಂತಾಗಿದೆ.
ಕಬ್ಬು ಬಾಕಿ ಪಾವತಿ ಮತ್ತು ಸೂಕ್ತ ಬೆಲೆಗಾಗಿ ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆ ಮಾಲೀಕರ ಹಗ್ಗಜಗ್ಗಾಟ ಮುಂದುವರೆಯುತ್ತಲೇ ಇದೆ. ಇದರ ಗುದ್ದಾಟದಿಂದಾಗಿ ಮಹಾರಾಷ್ಟ್ರದಿಂದ ಕಬ್ಬು ಕಟಾವ್ ಮಾಡುವ ಕೂಲಿ ಕೆಲಸಕ್ಕಾಗಿ ಬಂದ ಸಹಸ್ರಾರು ಕಾರ್ಮಿಕರು ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ. ಕೈ ತುಂಬ ಕೂಲಿ ಸಿಗುತ್ತದೆ ಎಂದು ಮಕ್ಕಳು ಮಡದಿಯನ್ನು ಕಟ್ಟಿಕೊಂಡು ಬಂದ ಮಹಾರಾಷ್ಟ್ರದ ಕೂಲಿಕಾರ್ಮಿಕರು ಕಂಗಾಲಾಗಿ ಕೂತಿದ್ದಾರೆ. ಕೈಯಲ್ಲಿ ಇದ್ದಷ್ಟು ಹಣ ಖಾಲಿ ಮಾಡಿಕೊಂಡು ಈಗ ರೇಷನ್ ಗೂ ಹಣವಿಲ್ಲದೆ, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.
ಪ್ರತಿ ವರ್ಷ ಬಾಗಲಕೋಟೆಗೆ ಮಹಾರಾಷ್ಟ್ರದಿಂದ 20 ಸಾವಿರ ಕೂಲಿ ಕಾರ್ಮಿಕರು ಬರುತ್ತಾರೆ. ಕಬ್ಬು ಸೀಜನ್ನಲ್ಲಿ ನಾಲ್ಕಾರು ಕಾಸು ಮಾಡ್ಕೊಂಡು ಊರಿಗೆ ವಾಪಸ್ ಹೋಗ್ತಾರೆ. ಆದರೆ ಈಗ ಕಬ್ಬಿನ ಬಾಕಿ ಪಾವತಿ ಮತ್ತು ಸೂಕ್ತ ಬೆಲೆ ಘೋಷಣೆವರೆಗೂ ಕಾರ್ಖಾನೆ ಆರಂಭಿಸಲು ಬಿಡೋದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇದರಿಂದ ಕಾರ್ಖಾನೆಗಳು ಕಬ್ಬು ನುರಿಯೋದನ್ನು ನಿಲ್ಲಿಸಿದ್ದು, ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಊರಿಗೆ ಮರಳುತ್ತಿದ್ದಾರೆ.
ಕಬ್ಬು ಬೆಳೆಗಾರರು ಮತ್ತು ರೈತರ ಸಂಘರ್ಷದಿಂದಾಗಿ ಕೂಲಿ ಕಾರ್ಮಿಕರಿಗೂ ತೊಂದರೆ ಉಂಟಾಗಿದೆ. ಎಲ್ಲಾ ಕಾರ್ಮಿಕರು ವಾಪಸ್ ಹೋಗ್ತಿದ್ದು, ಹೀಗೇ ಆದ್ರೆ ಮುಂದೊಂದ್ ದಿನ ಕೆಲಸಕ್ಕೆ ಕಾರ್ಮಿಕರೇ ಇಲ್ಲದಂತಾ ಆಗೋದರಲ್ಲಿ ಆಶ್ಚರ್ಯವಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv