ಮೈಸೂರು: ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.
ಹೌದು, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ಇಂದು ನಗರದ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮಾರುಕಟ್ಟೆಯಲ್ಲಿ ಸರಳವಾಗಿ ನಡೆದುಕೊಂಡು ಬಂದ ಅವರನ್ನು ನೋಡಿದ ಜನ ಅಚ್ಚರಿಗೊಂಡರು.
ಸುಧಾಮೂರ್ತಿಯವರು ನಡೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಕೈ ಮುಗಿದು ಗೌರವ ಸೂಚಿಸಿದರು. ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ಓಡಾಡಿ, ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ಅವರ ಸರಳತೆಗೆ ಜನ ಮಾರುಹೋದರು. 2018ರ ಮೈಸೂರು ದಸರಾಗೆ ಚಾಲನೆ ನೀಡಿದ್ದ ಅವರನ್ನು ಜನ ವಂದಿಸುತ್ತಾ ಹರ್ಷ ವ್ಯಕ್ತಪಡಿಸಿದರು.
ಸುಧಾಮೂರ್ತಿ ಮೊದಲಿನಿಂದಲೂ ಸರಳತೆ ಬೆಳೆಸಿಕೊಂಡು ಬಂದಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಬಳಿಕ ಛಾಯಾಗ್ರಾಹರೊಬ್ಬರು ಸುಧಾಮೂರ್ತಿ ಅವರಿಗೆ ಪುಸ್ತಕವನ್ನು ಕೊಟ್ಟಿದ್ದರು. ಈ ವೇಳೆ ಸುಧಾಮೂರ್ತಿ “ಈ ಪುಸ್ತಕ ನನಗೆ ಉಚಿತವಾಗಿ ನೀಡುತ್ತಿದ್ದೀರಾ” ಎಂದು ಪ್ರಶ್ನಿಸಿದರು. ಇದಕ್ಕೆ ಛಾಯಾಗ್ರಾಹಕರು ಹೌದು ಎಂದು ಉತ್ತರಿಸಿದಾಗ ಸುಧಾಮೂರ್ತಿ,”ನೀವು ಇಷ್ಟು ಕಷ್ಟಪಟ್ಟು ಸಿದ್ಧಪಡಿಸಿದ ಪುಸ್ತಕವನ್ನು ಉಚಿತವಾಗಿ ಪಡೆಯುವುದು ನನಗೆ ಶೋಭೆ ತರುವುದಿಲ್ಲ. ಉಚಿತವಾಗಿ ಪಡೆದರೆ ಪುಸ್ತಕಕ್ಕೆ ನಾನು ಮಾಡಿದ ಅವಮಾನವಾಗುತ್ತದೆ” ಎಂದು ಹೇಳಿದರು. ಅಷ್ಟೇ ಅಲ್ಲದೇ ಪುಸ್ತಕದ ಬೆಲೆಯಾದ 4,500 ರೂ. ಅನ್ನು ಛಾಯಾಗ್ರಾಹಕರ ಬ್ಯಾಂಕ್ ಖಾತೆಗೆ ಹಾಕಿ ಎಂದು ತನ್ನ ಸಿಬ್ಬಂದಿಗೆ ಸೂಚಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv