ಬೆಂಗಳೂರು: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಕುಟುಂಬಕ್ಕೆ ದೇಶಾದ್ಯಂತ ಸಾರ್ವಜನಿಕರು ಕಂಬನಿ ಮಿಡಿದಿದ್ದು, ಇನ್ಫೋಸಿಸ್ ಫೌಂಡೇಶನ್ ವತಿಯಿಂದಲೂ ಎಲ್ಲಾ ಯೋಧರ ಕುಟುಂಬಗಳಿಗೆ 10 ಲಕ್ಷ ರೂ. ನೆರವು ನೀಡುವುದಾಗಿ ಸಂಸ್ಥೆಯ ಅಧ್ಯಕ್ಷೆ ಸುಧಾಮೂರ್ತಿಯವರು ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ದಾಳಿಗೆ ತುತ್ತಾದ ವೀರ ಯೋಧರ ಕುಟುಂಬಕ್ಕೆ ನೆರವು ನೀಡಲು ನಿರ್ಧರಿಸಲಾಗಿದೆ. ಯೋಧರ ಸಾವಿನ ಸುದ್ದಿ ಕೇಳಿದ ತಕ್ಷಣ ನನ್ನ ಸಂಬಂಧಿಕರೇ ಸಾವಿಗೀಡಾದಂತೆ ದುಃಖ ಆಯ್ತು. ಬಾಳಿ ಬದುಕಬೇಕಾದ ಯುವಕರು ಸಾವನ್ನಪ್ಪಿದ್ದಾರೆ. ಆದ್ದರಿಂದ ಕುಟುಂಬಕ್ಕೆ ನೆರವುರ್ಮಾನ ಮಾಡಿದ್ದೇವೆ. ಆದರೆ ಇದು ಅವರ ಜೀವಕ್ಕೆ ಕೊಟ್ಟ ಬೆಲೆ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯೋಧ ಸಾವನ್ನಪ್ಪಿದ ವೇಳೆ ನಮ್ಮ ಕುಟುಂಬವನ್ನು ಯಾರು ಕೈ ಹಿಡಿಯಲಿಲ್ಲ ಎಂಬ ಭಾವನೆ ಬರದಂತೆ ಮಾಡಬೇಕು. ಅದ್ದರಿಂದಲೇ ಈ ನಿರ್ಧಾರ ಮಾಡಿದ್ದೇವೆ ಎಂದರು.
ನಾವು ಈಗಾಗಲೇ ಬಿಎಸ್ಎಫ್ ಸೈನಿಕರೊಂದಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ಇಂತಹ ದಾಳಿಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬ ಒಂದೆಡೆ ಆದರೆ ಮತ್ತೊಂದೆಡೆ ಘಟನೆಯಲ್ಲಿ ಗಾಯಗೊಂಡು ಬಳಿಕ ಜೀವನ ನಡೆಸಲು ಕಷ್ಟಪಡುವ ಯೋಧರ ಬಗ್ಗೆಯೂ ಹೆಚ್ಚಿನ ಗಮನ ಹರಿಸಿದ್ದೇವೆ. ನಮ್ಮ ಈ ಪ್ರಯತ್ನ ಇಲ್ಲಿಯೇ ನಿಲ್ಲುವುದಿಲ್ಲ ಮುಂದುವರಿಯುತ್ತದೆ ಎಂದರು.
ಮಂಡ್ಯದ ಗುರು ಅವರ ಸುದ್ದಿಯೂ ಕೇಳಿ ನನಗೆ ಭಾರೀ ಅಘಾತ ಆಗಿತ್ತು. ಈ ವೇಳೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದೆ. ಆದರೆ ಈಗ ಯೋಧನ ಕುಟುಂಬಸ್ಥರ ಮನಸ್ಥಿತಿ ಹೊಂದಾಣಿಕೆ ಆಗಲು ಸಮಯ ಬೇಕಿದೆ. ಹೆಚ್ಚಿನ ಜನರು ಕೂಡ ಇದೇ ಸಮಯದಲ್ಲಿ ಭೇಟಿ ನೀಡುತ್ತಾರೆ. ಇದರಿಂದ ಅವರಿಗೂ ಹೆಚ್ಚಿನ ಸಮಸ್ಯೆ ಆಗುತ್ತದೆ. ಆದ್ದರಿಂದ ಮಾರ್ಚ್ 15 ರ ಬಳಿಕ ಸ್ವತಃ ನಾವೇ ಭೇಟಿ ನೀಡಿ ಸಾಂತ್ವಾನ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ದೇಶದ ಯೋಧರ ಸಾವಿನ ಬಗ್ಗೆ ಜನರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಎಚ್ಚರಿಕೆ ಹೆಜ್ಜೆ ಮುಂದಿಡುವ ಅಗತ್ಯವಿದೆ. ನಮಗೇ ಕಾಣುವುದು ಮಾತ್ರ ಸತ್ಯವೂ ಅಲ್ಲ. ದೇಶದ ರಕ್ಷಣಾ ಅಂಶಗಳನ್ನು ಸಾರ್ವಜನಿಕವಾಗಿ ಹೇಳಲು ಕೂಡ ಸಾಧ್ಯವಿಲ್ಲ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕೂಡ ಆಗಲ್ಲ. ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ ಇದಕ್ಕೆ ಯುದ್ಧವೇ (ಸರ್ಜಿಕಲ್ ಸ್ಟ್ರೈಕ್) ಸರಿ ಎನಿಸಿದರೆ ಅದನ್ನೇ ಮಾಡಲಿ. ಅಥವಾ ಮಾತುಕತೆ ಮೂಲಕ ಸಾಧ್ಯವಾದರೆ ಅದನ್ನು ಮಾಡಲಿ. ಇಂತಹ ಘಟನೆ ಮತ್ತೆ ನಡೆದಂತೆ ಕ್ರಮಕೈಗೊಂಡು ವಿಳಂಬ ಆಗದಂತೆ ನೋಡಿಕೊಳ್ಳಬೇಕು ಎಂದು ಸ್ಟಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv