ದೋಹಾ: ದೋಹಾದಲ್ಲಿ ನೆಲೆಸಿರುವ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಈ ಬಾರಿಯ ಆರ್ಯಭಟ ಇಂಟನ್ರ್ಯಾಷನಲ್ ಪ್ರಶಸ್ತಿ ಲಭಿಸಿದ್ದು ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿ 2007 ರಿಂದ ಕತಾರ್ ನ ಅಲ್ ಮಿಸ್ನಾದ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ, ಅಲ್ಲಿಯ ಪ್ರಸ್ತುತ ಕರ್ನಾಟಕ ಸಂಘ, ಕತಾರ್ ನ ಉಪಾಧ್ಯಕ್ಷ ಹಾಗು ಖಜಾಂಜಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು, ತಮ್ಮ ಬಿಡುವಿನ ಸಮಯದಲ್ಲಿ ಇಲ್ಲಿಯ ಹಲವಾರು ಸಂಘ-ಸಂಸ್ಥೆಗಳಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಬೈಂದೂರ್ ಎಂಬ ಸಣ್ಣ ಊರಿನಲ್ಲಿ, ಮಾರ್ಚ್ 24, 1982 ರಂದು ಶ್ರೀ ಗುರುದತ್ತಾ ಶೆರುಗರ್ ಹಾಗು ಶ್ರೀಮತಿ ಮುಕುಂಬ ಎಂಬ ರೈತ ದಂಪತಿಗಳಿಗೆ ಜನಿಸಿದ ಇವರು ದೋಹಾದಲ್ಲಿ ನೆಲೆಸಿದ್ದಾರೆ.
ಕರ್ನಾಟಕ ಸಂಘದಲ್ಲಿ 2011 ರಿಂದ, ಕನ್ನಡ ಭಾಷೆ ಮತ್ತು ಸಂಸ್ಕೃತಿ ಯನ್ನು ಕತಾರ್ ನಲ್ಲಿ ಉಳಿಸಿ, ಬೆಳೆಸುವ ದಿಕ್ಕಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕದ ಚಲನಚಿತ್ರ ಹಾಗು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಹಲವಾರು ದಿಗ್ಗಜರುಗಳನ್ನು ಕತಾರ್ ಗೆ ಕರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕತಾರ್ ನಲ್ಲಿ ಕನ್ನಡ ಚಲನಚಿತ್ರಗಳ ಯಶಸ್ವಿ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ಇವರದ್ದು. ಕೇವಲ ಒಂದು ವರ್ಷದಲ್ಲಿ ರಂಗಿತರಂಗ, ಕೋಟಿಗೊಬ್ಬ-2, ಹೆಬ್ಬುಲಿ, ಕಿರಿಕ್ ಪಾರ್ಟಿ, ದೊಡ್ಮನೆ ಹುಡ್ಗ ಮತ್ತು ಚೌಕ ಚಲನಚಿತ್ರಗಳ ಪ್ರದರ್ಶನ. 50 ಕ್ಕೂ ಹೆಚ್ಚು ಕನ್ನಡ ಜನರಿಗೆ ಕತಾರ್ ನಲ್ಲಿ ಕೆಲಸ ದೊರಕಿಸಿಕೊಟ್ಟ ಹೆಗ್ಗಳಿಕೆ ಇವರದ್ದು.
ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ)ದ ಸದಸ್ಯನಾಗಿದ್ದು ಅಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಇನ್ನಿತರ ಕಾರ್ಯಕ್ರಮಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಇಂಡಿಯನ್ ಕಮ್ಯುನಿಟಿ ಬೆನೆವೆಲೆಂಟ್ ಫೋರಮ್(ಐಸಿಬಿಎಫ್) ನಲ್ಲಿ ಸದಸ್ಯನಾಗಿದ್ದು ಅಲ್ಲಿ ಹಮ್ಮಿಕೊಳ್ಳುವ ದಾನ-ದತ್ತಿ ಕಾರ್ಯಗಳಲ್ಲಿ, ಉಚಿತ ವೈದ್ಯಕೀಯ ಶಿಬಿರಗಳಲ್ಲಿ, ಕಾರ್ಮಿಕರ ಶ್ರೇಯೋಭಿವೃದ್ಧಿ ಕಾರ್ಯಗಳಲ್ಲಿ ನಿರಂತರ ಹಾಗು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.