ನವದೆಹಲಿ: ಸಂಸದ ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರಿಲಾನ್ಸ್ ಪೊಲಿಟಿಶಿಯನ್(ಸ್ವತಂತ್ರ ರಾಜಕಾರಣಿ) ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿಯವರು ಖಾರವಾಗಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸುಬ್ರಮಣಿಯನ್ ಸ್ವಾಮಿ ಒಬ್ಬ ಸ್ವತಂತ್ರ ರಾಜಕಾರಣಿ ಎಂದು ಹೇಳಿದ್ದಾರೆ. ನಾನು 6 ಬಾರಿ ಸಂಸದನಾಗಿದ್ದೇನೆ. ಎರಡು ಬಾರಿ ಸಚಿವನಾಗಿದ್ದೇನೆ. ಆದರೆ ಯಾರ ಬೂಟನ್ನು ನೆಕ್ಕಿಲ್ಲ. ಪ್ರಜಾಪ್ರಭುತ್ವಕ್ಕೆ ಸತ್ಯ ಹೇಳುವುದು ಅನಿವಾರ್ಯ ಎಂದು ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದಾರೆ.
ಬೊಮ್ಮಾಯಿ ಹೇಳಿದ್ದೇನು?
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಸೆಪ್ಟೆಂಬರ್ 15ರಂದು ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಬ್ರಮಣಿಯನ್ ಸ್ವಾಮಿಯವರ ಟ್ವೀಟ್ ಕುರಿತು ಉಲ್ಲೇಖಿಸಿ ಮಾತನಾಡುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ್ದ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ, ಸುಬ್ರಮಣಿಯನ್ ಸ್ವಾಮಿಯವರ ಬಗ್ಗೆ ನಿಮಗೆ ಗೊತ್ತಿದೆ. ಅವರು ಯಾವುದೇ ಪಕ್ಷದಲ್ಲಿರಲಿ ಸ್ವತಂತ್ರ ರಾಜಕಾರಣಿ ಇದ್ದಂಗೆ. ಅವರಿಗೆ ಏನು ಮನಸ್ಸಿಗೆ ಬರುತ್ತದೋ ಅದನ್ನು ಹೇಳುತ್ತಾರೆ. ಅವರೊಬ್ಬರ ಸ್ವತಂತ್ರ ರಾಜಕಾರಣಿಯಾಗಿ ಅವರದ್ದೇಯಾದ ವಿಶ್ಲೇಷಣೆಯಲ್ಲಿ ಹೇಳುತ್ತಿರುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ದೇವಸ್ಥಾನದ ಮೇಲೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಆಚರಿಸುತ್ತಿರಲಿಲ್ಲ: ಪ್ರತಾಪ್ ಸಿಂಹ
ಈ ಹಿಂದೆ ಜನತಾ ಪಕ್ಷ, ಜನತಾದಳ ಕಟ್ಟುವಾಗ ಸಹ ಇದೇ ರೀತಿ ಮಾತನಾಡಿದ್ದರು. ಅಲ್ಲದೆ ಚಂದ್ರಶೇಖರ್ ಅವರ ಸರ್ಕಾರದಲ್ಲಿದ್ದೂ ಪ್ರಧಾನಿ ವಿರುದ್ಧವೇ ಮಾತನಾಡಿದ್ದರು. ಇದು ಸುಬ್ರಮಣಿಯನ್ ಸ್ವಾಮಿ ಅವರ ಸ್ವಭಾವ ಹಾಗೂ ನಡವಳಿಕೆಯಾಗಿದೆ. ಅವರು ಹಣಕಾಸು, ಆರ್ಥಿಕತೆಯಲ್ಲಿ ಪ್ರತಿಭಾನ್ವಿತರು. ಈ ಕ್ರೆಡಿಟ್ನ್ನು ಸಹ ಅವರಿಗೆ ಕೊಡುತ್ತೇವೆ ಎಂದು ಹೇಳಿದ್ದರು. ಹಲವಾರು ವಿಷಯಗಳಲ್ಲಿ ಪಕ್ಷದಲ್ಲಿ ಬೇರೆ ಬೇರೆ ಅಭಿಪ್ರಾಯಗಳು ಇರುತ್ತವೆ. ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲವೇ ಎಂದು ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದರು.