ಮಂಗಳೂರು: ತಣ್ಣಾಗಾಗಿದ್ದ ಹಿಜಬ್ ವಿವಾದ ಮಂಗಳೂರು ಕಾಲೇಜಿನಲ್ಲಿ ಮತ್ತೆ ಪ್ರಾರಂಭವಾಗಿದೆ.
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಬಂದಿದ್ದರು. ಈ ಹಿನ್ನೆಲೆ ಕೆಲ ವಿದ್ಯಾರ್ಥಿಗಳು ನಾವು ಇನ್ಮುಂದೆ ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ಪ್ರತಿಭಟನೆ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಕ್ಲಾಸ್ ಬಹಿಷ್ಕರಿಸಿ, ಎಬಿವಿಪಿ ನೇತೃತ್ವದಲ್ಲಿ ಕ್ಯಾಂಪಸ್ ಬಳಿ ಪ್ರತಿಭಟನೆ ಮಾಡಿದರು. ಇದನ್ನೂ ಓದಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಇನ್ಮುಂದೆ ಸಿಗುತ್ತೆ ಇಳಕಲ್ ಸೀರೆ
ಇತ್ತೀಚೆಗೆ ಕಾಲೇಜು ಆಡಳಿತ ಮಂಡಳಿ ಮೀಟಿಂಗ್ನಲ್ಲಿ ಹಿಜಬ್ ಮತ್ತು ಕೇಸರಿ ಶಾಲು ಹಾಕಬಾರದು ಎಂದು ನಿರ್ಧಾರ ಮಾಡಲಾಗಿದೆ. ಆದರೂ ವಿದ್ಯಾರ್ಥಿನಿಯರು ಹಿಜಬ್ ಹಾಕಿಕೊಂಡು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳ ಜೊತೆ ವಿವಿ ರಿಜಿಸ್ಟ್ರಾರ್ ಕಿಶೋರ್ ಕುಮಾರ್ ಮಾತನಾಡಿದ್ದು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಎರಡು ತಿಂಗಳಿನಿಂದ ಹಿಜಬ್ ನಿಯಮವನ್ನು ಕಾಲೇಜಿನಲ್ಲಿ ಪಾಲಿಸುತ್ತಿಲ್ಲ. ಇದಕ್ಕೆ ಕಾಲೇಜು ಪ್ರಾಂಶುಪಾಲರು ಮತ್ತು ಕೆಲ ಶಿಕ್ಷಕರ ಕಾರಣವಾಗಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಕಾಲೇಜು ವಿದ್ಯಾರ್ಥಿ ಸಂಘದ ನಾಯಕನ ಬದಲಾವಣೆಗೂ ಸಹ ಮನವಿ ಮಾಡಿದರು.
ಕೊನೆಗೆ ರಿಜಿಸ್ಟ್ರಾರ್ ಹಿಜಬ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವ ಭರವಸೆ ಕೊಟ್ಟದ್ದು, ನಾಳೆಯಿಂದ ಯಾವುದೇ ಕಾರಣಕ್ಕೆ ಹಿಜಬ್ ಧರಿಸಿದವರಿಗೆ ಕಾಲೇಜಿನ ಒಳಗೆ ಬಿಡುವುದಿಲ್ಲವೆಂದು ಭರವಸೆ ಕೊಟ್ಟರು. ಭರವಸೆ ಹಿನ್ನೆಲೆ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ. ನಾಳೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಕಾಲೇಜಿನಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತಕ್ಕೆ 5ರ ಮಗು ಬಲಿ – ಸಾವಿನ ಸಂಖ್ಯೆ 11ಕ್ಕೆ ಏರಿಕೆ