ಕಾರವಾರ: ಪೌರತ್ವ ತಿದ್ದುಪಡಿ ವಿಚಾರದಲ್ಲಿ ಉಂಟಾದ ದ್ವೇಷಮಯ ವಾತಾವರಣದಿಂದಾಗಿ ಲಕ್ನೋದ ನದ್ವಾ ಕಾಲೇಜಿನಲ್ಲಿ ಓದುತ್ತಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ವಾಪಸ್ಸಾಗಿದ್ದಾರೆ.
ಜಾಮಿಯಾ ಮಿಲ್ಲಿಯಾ, ಅಲಿಘಡ ಮುಸ್ಲಿಂ ಯೂನಿವರ್ಸಿಟಿಗಳ ಬೆನ್ನಿಗೆ ಪೌರತ್ವ ಮಸೂದೆಯ ಪ್ರತಿಭಟನೆಗೆ ನದ್ವಾ ಕಾಲೇಜು ವಿದ್ಯಾರ್ಥಿಗಳು ಕೂಡ ಬೆಂಬಲಿಸಿದ್ದರು.
ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಕೂಡ ಉಂಟಾಗಿತ್ತು. ಜಾಮಿಯಾದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಪ್ರತಿಭಟಿಸಿ ದೇಶದ ವಿವಿಧ ಕಡೆಗಳಲ್ಲಿ ಕೂಡ ಪ್ರತಿಭಟನೆ ತೀವ್ರಗೊಂಡಿದ್ದವು.
ಇದೇ ವೇಳೆ ಕ್ಯಾಂಪಸ್ ತೊರೆಯುವಂತೆ ಪೊಲೀಸರು ಸೂಚನೆ ನೀಡಿದ್ದರಿಂದ ಪ್ರಾಣ ರಕ್ಷಣೆಗಾಗಿ ಲಕ್ನೋದ ನದ್ವಾ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಟ್ಕಳಕ್ಕೆ ಮರಳಿದ್ದಾರೆ.
ರೈಲ್ವೆ ಮೂಲಕ ಭಟ್ಕಳಕ್ಕೆ ಬಂದಿಳಿದ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಮನೆ ಸೇರಿಕೊಂಡಿದ್ದಾರೆ. ಭಟ್ಕಳದಲ್ಲಿ ಜಾಮಿಯಾ ಸ್ಕೂಲಿನಲ್ಲಿ ಶಿಕ್ಷಣ ಮುಗಿಸಿ ಇನ್ನು ಎರಡು ವರ್ಷದ ಶಿಕ್ಷಣಕ್ಕಾಗಿ ಲಕ್ನೋಗೆ ಇವರೆಲ್ಲರೂ ತೆರಳಿದ್ದರು.