ಕಾರವಾರ: ವಿದ್ಯಾರ್ಥಿಗಳಿಬ್ಬರ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ರೈಲ್ವೆ ಅವಘಡವೊಂದು ತಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟದಲ್ಲಿ ನಡೆದಿದೆ.
ಮಂಜುನಾಥ್ ಹಾಗೂ ಶಶಿಕುಮಾರ್ ರೈಲು ಅವಘಡ ತಪ್ಪಿಸಿದ ವಿದ್ಯಾರ್ಥಿಗಳು. ಇಬ್ಬರು ಕುಮಟ ಪಟ್ಟಣದ ನೆಲ್ಲಿಕೇರಿಯ ವಿದ್ಯಾರ್ಥಿಗಳಾಗಿದ್ದು, ಶನಿವಾರ ಸಂಜೆ ರೈಲು ಹಳಿ ಬಳಿ ಹಣ್ಣು ಕೀಳಲು ತೆರಳಿದ್ದರು. ಈ ವೇಳೆ ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿದ್ದನ್ನು ಗಮನಿಸಿದ್ದಾರೆ.
- Advertisement 2
- Advertisement 3
ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿದ್ದನ್ನು ಗಮನಿಸಿದ ಇಬ್ಬರು ವಿದ್ಯಾರ್ಥಿಗಳು ರೈಲ್ವೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಮಾತು ಕೇಳಿದ ತಕ್ಷಣ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ದುರಸ್ತಿ ಕಾರ್ಯ ಮಾಡುವ ಮೂಲಕ ಅನಾಹುತವನ್ನು ತಪ್ಪಿಸಿದ್ದಾರೆ. ಮಂಜುನಾಥ್ ಹಾಗೂ ಶಶಿಕುಮಾರ್ ಅವರ ಈ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Advertisement 4
ಶನಿವಾರ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಗಟ್ಟ ಪ್ರದೇಶದಲ್ಲೂ ಬಸ್ ಚಾಲಕನ ಸಮಯಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದಿತ್ತು. ಲಾರಿ ಚಾಲಕ ಈರಣ್ಣ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಚಾಲಕ ಕತ್ತಿ ಕಾನಾಪುರ್ ತಮ್ಮ ಜೀವದ ಹಂಗು ತೊರೆದು ಬಸ್ ಪ್ರಯಾಣಿಕರನ್ನು ರಕ್ಷಿಸಿದರು. ಬ್ರೇಕ್ ಫೇಲ್ ಆಗಿದ್ದ ಬಸ್ಸನ್ನು ನಿರಂತರವಾಗಿ ಲಾರಿಗೆ ಡಿಕ್ಕಿ ಹೊಡೆಸಿಕೊಳ್ಳುವ ಮೂಲಕ ಬಸ್ ವೇಗ ತಗ್ಗಿಸಿ ಪ್ರಯಾಣಿಕರನ್ನು ಸಂಭವನೀಯ ಅಪಘಾತದಿಂದ ಪಾರು ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv