ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಕ್ಷರಶಃ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತದೆ. ಇದಕ್ಕೆ ಮೂಲಕ ಕಾರಣ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ವೇದಿಕೆ.
ಎರಡನೇ ದಿನದ ಯುವ ದಸರಾ ವೇದಿಕೆ ಸಂಗೀತ ಹಾಗೂ ನೃತ್ಯ ಪ್ರಕಾರಗಳಿಂದ ಚಿಂದಿ ಮಾಡಿತು. ಕಾರ್ಯಕ್ರಮದ ಮೊದಲಿಗೆ ಕಾಲೇಜು ವಿದ್ಯಾರ್ಥಿಗಳ ಜಾನಪದ ನೃತಗಳು ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಧರೆಗಿಳಿಸಿದರು. ನಂತರ ಗಾಯಕಿ ಸಂಗೀತ ರವೀಂದ್ರನಾಥ್ ಅವರ ಗಾಯನ ಯುವ ದಸರಾ ವೇದಿಕೆಗೆ ರಂಗು ತಂದಿತು. ಇದಾದ ಬಳಿಕ ಬಾಂಬೆ ಮತ್ತು ರಷ್ಯನ್ ಟೀಂ ಮಾಡಿದ ಡ್ಯಾನ್ಸ್ ಯುವಕರನ್ನು ಬೆರಗುಗೊಳಿಸುವುದರ ಜೊತೆಗೆ ಕುಣಿದು ಕುಪ್ಪಳಿಸುವಂತೆ ಮಾಡಿತು.
ಇದಾದ ಬಳಿಕ ವೇದಿಕೆಗೆ ರಾಕ್ ಮ್ಯೂಸಿಕ್ ಹಾಗೂ ಮೆಲೋಡಿ ಸಾಂಗ್ ಮೂಲಕ ಎಂಟ್ರಿ ಕೊಟ್ಟ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಗಾಯನಕ್ಕೆ ಎಲ್ಲರೂ ಫುಲ್ ಫಿದಾ ಆದರು. ಮೋಹಿತ್ ಚೌಹಾಣ್ ರಾಕ್ ಮ್ಯೂಸಿಕ್ ಹಾಡುತ್ತಿದ್ರೆ, ಯುವಕರು ಕುಣಿದು ಕುಪ್ಪಳಿಸಿದ್ದರು. ರೊಮ್ಯಾಂಟಿಕ್ ಸಾಂಗ್ ಹೇಳಿದಾಗ ತಲೆದೂಗಿಸಿ ಸಂಗೀತದ ಮಜಲನ್ನು ಆನಂದಿಸಿದರು.
ಎರಡನೇ ದಿನದ ಯುವ ದಸರಾ ಎಲ್ಲಾ ಪ್ರಕಾರದ ಸಂಗೀತ ಹಾಗೂ ನೃತ್ಯಗಳನ್ನು ವೇದಿಕೆ ಮೇಲೆ ಚೆಲ್ಲುವ ಮೂಲಕ ಸಾಂಸ್ಕೃತಿಕ ವೈಭವದ ಕಲೆಯನ್ನು ಚೆಲ್ಲಿತು. ಇಂದು ಯುವ ದಸರಾ ವೇದಿಕೆಯಲ್ಲಿ ಗಾಯಕಿ ಮೊನಾಲಿ ಠಾಕೂರ್ರ ಗಾಯನವಿದ್ದು, ಇದಕ್ಕಾಗಿ ಯುವಸ್ತೋಮ ಕಾದು ಕುಳಿತಿದೆ.