ಮಹಿಳಾ ಅಧಿಕಾರಿ ಮೇಲೆ ಕುರ್ಚಿಯಿಂದ ಹಲ್ಲೆಗೈದ ವಿದ್ಯಾರ್ಥಿಗಳು- ವಿಡಿಯೋ

Public TV
1 Min Read
students

ಲಕ್ನೋ: ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡಿರುತ್ತೇವೆ. ಆದರೆ ವಿದ್ಯಾರ್ಥಿಗಳೇ ಅಧಿಕಾರಿಯ ಮೇಲೆ ಕುರ್ಚಿಯಿಂದ ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿ ಜಿಲ್ಲೆಯ ಚಕ್ ಧೌರಹ್ರಾದ ಗಾಂಧಿ ಸೇವಾ ನಿಕೇತನ್ ಆಶ್ರಮದಲ್ಲಿ ನಡೆದಿದೆ.

ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಯ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಆಶ್ರಮದ ಆಡಳಿತ ಮಂಡಳಿ ಆದೇಶದ ಮೇರೆಗೆ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ನಿಂದಿಸಿ, ಥಳಿಸಿದೆ ಎಂದು ಆರೋಪಿಸಲಾಗಿದೆ.

ನಾನು ಗಾಂಧಿ ಸೇವಾ ನಿಕೇತನ್ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಸ್ಥೆಯ ವ್ಯವಸ್ಥಾಪಕರು ನನಗೆ ಹೊಡೆಯುವಂತೆ ಹಾಗೂ ನಿಂದಿಸುವಂತೆ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ. ಮಕ್ಕಳು ನನಗೆ ಕುರ್ಚಿಗಳಿಂದ ಹೊಡೆದು, ಕಪಾಳಮೋಕ್ಷ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ದೂರು ನೀಡುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ಮಮತಾ ದುಬೆ ಆರೋಪಿಸಿದ್ದಾರೆ.

ಈ ಘಟನೆ ಆಶ್ರಮದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಶ್ರಮದ ಸಿಬ್ಬಂದಿ ಯಾಕೆ ಹೊಡೆಸುವ ಉದ್ದೇಶ ಹೊಂದಿದ್ದರು. ಆಶ್ರಮದ ವ್ಯವಸ್ಥಾಪಕರು ವಿದ್ಯಾರ್ಥಿಗಳನ್ನು ಏಕೆ ಕೆರಳಿಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆಶ್ರಮದ ಆಡಳಿತ ಮಂಡಳಿ ಯಾಕೆ ಈ ರೀತಿ ಮಾಡುತ್ತಿದೆ ಎಂಬ ಚಿಂತೆ ನನ್ನನ್ನು ಕಾಡುತ್ತಿದೆ. ಎರಡು ದಿನಗಳ ಹಿಂದೆ ವಾಶ್ ರೂಂನ ಬಾಗಿಲು ಲಾಕ್ ಆಗಿತ್ತು. ಇದನ್ನೂ ಸಹ ವಿದ್ಯಾರ್ಥಿಗಳೇ ಮಾಡಿದ್ದರು ಎಂದು ದುಬೆ ಆತಂಕ ವ್ಯಕ್ತಪಡಿಸಿದ್ದಾರೆ.

ವಾಶ್ ರೂಂನಲ್ಲಿ ಲಾಕ್ ಮಾಡಿದ್ದರ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮಕ್ಕಳು ಏನು ಬೇಕಾದರೂ ಮಾಡಬಹುದು ಎಂದರು. ಇದಾದ ಎರಡು ದಿನಗಳ ನಂತರ ನನ್ನನ್ನು ವಿದ್ಯಾರ್ಥಿಗಳು ಹೊಡೆದಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೂ ದೂರು ನೀಡಿದ್ದೇನೆ ಎಂದು ದುಬೆ ತಿಳಿಸಿದರು.

ಈ ಹಿಂದೆ ಅನೇಕ ಬಾರಿ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ದುಬೆ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಯಾವುದೇ ಹೇಳಿಕೆ ನೀಡಿಲ್ಲ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *