ಕೊಪ್ಪಳ: ಜಿಲ್ಲೆಯ ಬಳಗೇರಿ ಗ್ರಾಮದಲ್ಲಿರುವ ಹಳ್ಳಕ್ಕೆ ಮೇಲ್ಸೆತುವೆ ಇರದ ಪರಿಣಾಮ ಜೀವ ಕೈಯಲ್ಲಿ ಇಟ್ಟುಕೊಂಡು, ಭಯದಿಂದ ತುಂಬಿ ಹರಿಯುವ ಹಳ್ಳವನ್ನು ದಾಟಿ ನೂರಾರು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ.
ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿರುವ ಮೇಲ್ಸೆತುವೆ ಇರದ ಹಳ್ಳವನ್ನು ದಾಟಿ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ ಪರಸ್ಥಿತಿ ಎದುರಾಗಿದೆ. ಗುರುವಾರ ಸುರಿದ ಮಳೆಗೆ ಹಳ್ಳ ತುಂಬಿ ಹರಿಯುತ್ತಿದ್ದು, ಈ ಹಳ್ಳಕ್ಕೆ ಮೇಲ್ಸೆತುವೆ ಇರದ ಕಾರಣ ಜನರು ಹಳ್ಳದಾಚೆಗೆ ತಲುಪಬೇಕೆಂದರೆ ಹರಿಯುವ ನೀರಿನಲ್ಲೇ ನಡೆದು ಸಾಗಿ ಮತ್ತೊಂದು ಕಡೆಗೆ ಹೋಗಬೇಕಿದೆ.
ಪ್ರತಿನಿತ್ಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಹಾಗೂ ಶಾಲೆಯಿಂದ ಮರಳಿ ಗ್ರಾಮಕ್ಕೆ ಹಿಂದಿರುಗುವಾಗ ಇದೇ ಹಳ್ಳದಲ್ಲಿಯೇ ಸಂಚರಿಸುತ್ತಿದ್ದಾರೆ. ಹಳ್ಳವನ್ನು ದಾಟುವ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಏನಾದರೂ ಅನಾಹುತ ಆಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮೇಲ್ಸೆತುವೆ ನಿರ್ಮಿಸಬೇಕಿದೆ.