ಉಡುಪಿ: ಉಡುಪಿ ನಗರದಲ್ಲಿದ್ದ ಹಿಜಬ್ ವಿವಾದ ಕುಂದಾಪುರ ತಾಲೂಕಿಗೆ ವ್ಯಾಪಿಸಿದೆ. ಹಿಜಬ್ಗೆ ವಿರುದ್ಧವಾಗಿ ಸರ್ಕಾರಿ ಪಿಯು ಕಾಲೇಜ್ನ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ತೊಟ್ಟು ಕ್ಲಾಸಿಗೆ ಬಂದಿದ್ದಾರೆ.
ಉಡುಪಿಯ ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಆರಂಭವಾದ ಹಿಜಬ್ ಕಿರಿಕ್ ಕುಂದಾಪುರಕ್ಕೆ ಹರಡಿದೆ. ಪಿಯು ಬೋರ್ಡ್ ಸಮವಸ್ತ್ರ ಮಾತ್ರ ಧರಿಸಬೇಕು ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಆಪಾದನೆ ಮಾಡುವಂತೆ ಕುಂದಾಪುರ ಸರ್ಕಾರಿ ಪಿಯು ಕಾಲೇಜ್ ನೋಟಿಸ್ ಹೊರಡಿಸಿದೆ. ಇದಾಗಿ ವಾರ ಕಳೆದರೂ ಹಿಜಬ್ ಬಿಚ್ಚಿಟ್ಟು ಮುಸಲ್ಮಾನ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ನೂರಾರು ಹಿಂದೂ ಯುವಕರು ಕೇಸರಿ ಶಾಲುಗಳನ್ನು ತೊಟ್ಟು ಕಾಲೇಜು ಕ್ಯಾಂಪಸ್ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ಆನ್ಲೈನ್ ಎಂಬ ತಾರತಮ್ಯದ ಕ್ಲಾಸ್ ಬೇಡ – ಹಿಜಬ್ ಹಾಕಿಯೇ ಕ್ಲಾಸಿಗೆ ಹೋಗುತ್ತೇವೆ
ಎಲ್ಲಾ ತರಗತಿಗಳ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಹಾಕಿಕೊಂಡು ಕ್ಯಾಂಪಸ್ನಲ್ಲಿ ಓಡಾಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕಾಲೇಜಿನಲ್ಲಿ ಮುಸಲ್ಮಾನ ಪೋಷಕರ ಸಭೆ ಕರೆದಿದ್ದಾರೆ. ಸರ್ಕಾರದ ಆದೇಶವನ್ನು ಮನದಟ್ಟು ಮಾಡಲು ಎಷ್ಟೇ ಪ್ರಯತ್ನಿಸಿದರೂ ಅದಕ್ಕೆ ಪೋಷಕರು ಒಪ್ಪಿಗೆ ಸೂಚಿಸಿಲ್ಲ. ಜಮಾತ್ ಮತ್ತು ಮಸೀದಿಯ ಸಭೆಯಲ್ಲಿ ಆಗುವ ತೀರ್ಮಾನ ನಮಗೆ ಅಂತಿಮ ಎಂದಿದ್ದಾರೆ. ಹಾಗಾಗಿ ಶ್ರೀನಿವಾಸ್ ಶೆಟ್ಟಿ ಮುಸಲ್ಮಾನ ಪೋಷಕರ ಜೊತೆ ನಡೆಸಿದ ಸಭೆ ಯಾವುದೇ ಫಲ ಕೊಟ್ಟಿಲ್ಲ. ಇದನ್ನೂ ಓದಿ: ಇಂದು ಹಿಜಬ್, ನಾಳೆ ಷರಿಯತ್ ಕಾನೂನು – ಉಡುಪಿ ಹಿಂದೂ ಜಾಗರಣಾ ವೇದಿಕೆ ಗರಂ
ಪೋಷಕರ ಸಭೆಯ ನಡುವೆ ಶಿಕ್ಷಣ ಸಚಿವ ನಾಗೇಶ್ ಜೊತೆ ಸಮಾಲೋಚನೆ ನಡೆದಿದೆ. ಸಮಿತಿ ರಚನೆಯಾಗಿ ತೀರ್ಮಾನ ಆಗುವತನಕ ಹಿಜಬ್ ತೊಡುವಂತಿಲ್ಲ ಎಂದು ಸಚಿವರು ಉತ್ತರ ನೀಡಿದ್ದಾರೆ. ಈ ನಡುವೆ ಹಿಂದೂ ಜಾಗರಣ ವೇದಿಕೆ ಯುವ ಘಟಕ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದೆ. ಕಾಲೇಜು ಕ್ಯಾಂಪಸ್ನಲ್ಲಿ ಹಿಜಬ್ ಕಾಣಿಸಿಕೊಂಡರೆ ನೂರಾರು ಕೇಸರಿ ರುಮಾಲುಗಳು ನಾಳೆ ರಾರಾಜಿಸುತ್ತವೆ ಎಂಬ ಎಚ್ಚರಿಕೆ ಹಿಂದೂ ಜಾಗರಣಾ ಮುಖಂಡರಿಂದ ಕೇಳಿಬಂದಿದೆ. ಇದನ್ನೂ ಓದಿ: ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ: ಸ್ಮೃತಿ ಇರಾನಿ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕಾಲೇಜು ಆಡಳಿತ ಮಂಡಳಿಯಲ್ಲಿ ಅಧ್ಯಕ್ಷನಾಗಿರುವ ಹಿನ್ನೆಲೆಯಲ್ಲಿ ನಾನು ಪೋಷಕರ ಜೊತೆ ಸಭೆಯನ್ನು ಕರೆದಿದ್ದೇನೆ. ಸರ್ಕಾರದ ಆದೇಶ ಏನಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ. ಶಿಕ್ಷಣ ಸಚಿವರ ಜೊತೆ ಪೋಷಕರಿಗೆ ಮಾತನಾಡಿಸಿದ್ದೇನೆ. ಅವರು ಈ ಹಂತದಲ್ಲಿ ಹಿಜಬ್ ತೆಗೆದು ಬರಲು ಒಪ್ಪಿಗೆ ಸೂಚಿಸಿಲ್ಲ. ಸರ್ಕಾರದ ಆದೇಶವನ್ನು ಕಾಲೇಜು ಪಾಲಿಸುತ್ತದೆ. ನಾಳೆಯಿಂದ ಕಠಿಣ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದರು.
ಹಿಂದೂ ಜಾಗರಣ ವೇದಿಕೆ ಯುವ ಘಟಕ ಇದರ ಸದಸ್ಯರು ನಾಳೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ಸರ್ಕಾರದ ಆದೇಶವನ್ನು ಮುಸಲ್ಮಾನ ವಿದ್ಯಾರ್ಥಿನಿಯರು ಪಾಲಿಸಿದರೆ, ನಾವು ಶಾಲುಗಳನ್ನು ಧರಿಸದಂತೆ ನೋಡಿಕೊಳ್ಳುತ್ತೇವೆ ಎಂದು ಸಂಘಟನೆಯ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದರು. ಇದನ್ನೂ ಓದಿ: ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ: ಮೋದಿ