ರಾಮನಗರ: ಸರ್ಕಾರಿ ಶಾಲೆಯೊಂದರ ಕಟ್ಟಡ ಹಾಳಾಗಿದ್ದು, ಮಕ್ಕಳ ಜೀವಕ್ಕೆ ಕುತ್ತು ತರುವ ಸ್ಥಿತಿ ತಲುಪಿದೆ. ಇದಕ್ಕೆ ಸಾಕ್ಷಿಯಾಗಿರೋದು ಇಂಧನ ಸಚಿವರ ತವರು ಜಿಲ್ಲೆಯ ಸರ್ಕಾರಿ ಶಾಲೆ.
ಹಾಳಾಗಿರೋ ಶಾಲಾ ಕಟ್ಟಡ. ಅಲ್ಲಲ್ಲಿ ಕಿತ್ತು ಹೋಗಿರೋ ಮೇಲ್ಛಾವಣಿ. ಹೊರಭಾಗದಲ್ಲಿಯೇ ಕುಳಿತು ಪಾಠ ಕೇಳುತ್ತಿರೋ ವಿದ್ಯಾರ್ಥಿಗಳು. ಇದು ಸಿದ್ದರಾಮಯ್ಯ ಸರ್ಕಾರದ ಮಾದರಿ ಸರ್ಕಾರಿ ಶಾಲೆಯ ಈಗಿನ ದುಸ್ಥಿತಿ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯವರೆಗೂ ಇದ್ದು, 92 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ. ಕಳಪೆ ಕಾಮಗಾರಿಯಿಂದ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು ಕಿತ್ತು ಬೀಳುತ್ತಿದೆ. ಮಳೆ ಬೇರೆ ಜೋರಾಗಿ ಬರುತ್ತಿದ್ದು ಕಟ್ಟಡ ಯಾವಾಗ ಬೀಳುತ್ತೋ ಎಂದು ಮಕ್ಕಳು ಶಾಲೆ ಹೊರಗೆ ಪಾಠ ಕೇಳುತ್ತಿದ್ದಾರೆ.
ಶೌಚಾಲಯಗಳು ಸಹ ಹದಗೆಟ್ಟಿದ್ದು ಗಿಡಗಂಟೆಗಳು ಬೆಳೆದು ಹಾವು, ಹಲ್ಲಿಗಳ ವಾಸಸ್ಥಾನವಾಗಿದೆ. ಸಾಕಷ್ಟು ಬಾರಿ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದು ಶಿಕ್ಷಕರೇ ಬೇಸರ ವ್ಯಕ್ತಪಡಿಸುತ್ತಾರೆ.