ಚಂಡೀಗಢ: ಚಡ್ಡಿ ಹಾಕಿಕೊಂಡು ಹೋಗಿದ್ದಕ್ಕೆ ಶಿಕ್ಷಕ ಕ್ಲಾಸಿನಲ್ಲಿ ಹೊಡೆದು ಅವಮಾನಿಸಿದ್ದಕ್ಕೆ ಬೇಸರಗೊಂಡು 11ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪಂಜಾಬಿನ ಲುಧಿಯಾನ ಜಿಲ್ಲೆಯ ಗುರ್ಮೆಲ್ ನಗರದ ಮನೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾರ್ಥಿ ಚಡ್ಡಿ ಹಾಕಿಕೊಂಡು ಬಂದಿದ್ದ ಎಂದು ಶಿಕ್ಷಕರು ವಿದ್ಯಾರ್ಥಿಯನ್ನು ಹೊಡೆದಿದ್ದಾರೆ. ಇದರಿಂದ ಬೇಸರಗೊಂಡ 11ನೇ ತರಗತಿ ವಿದ್ಯಾರ್ಥಿ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನಿಗೆ ರಾತ್ರಿ ಊಟ ಮಾಡುವಂತೆ ತಾಯಿ ಹೇಳಿದ್ದಾರೆ. ಊಟ ಬೇಡವೆಂದು ವಿದ್ಯಾರ್ಥಿ ತನ್ನ ರೂಂಗೆ ತೆರಳಿದ್ದಾನೆ. ನಂತರ ತಾಯಿ ರೂಂಗೆ ಹೋಗಿ ನೋಡಿದ್ದು, ಬಾಗಿಲು ತೆರೆಯುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ. ಮಗನ ದೇಹ ಸೀಲಿಂಗ್ ಫ್ಯಾನಿಗೆ ನೇತಾಡುತ್ತಿದ್ದುದನ್ನು ಕಂಡು ಕುಸಿದಿದ್ದಾರೆ. ನಂತರ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಸಾವನ್ನಪ್ಪಿರುವ ಕುರಿತು ದೃಢಪಡಿಸಿದ್ದಾರೆ.
ವಿದ್ಯಾರ್ಥಿ ಲುಧಿಯಾನ ನಗರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದು, ಶಿಕ್ಷಕ ಮಾಡಿದ ಅವಮಾನದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪಂಜಾಬ್ ಪೊಲೀಸರು ಈ ಕುರಿತು ಶಾಲೆಯ ನಿರ್ದೇಶಕರು ಹಾಗೂ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಆತ್ಮಹತ್ಯೆ ಪ್ರೇರಣೆ ನೀಡಿದ ಕುರಿತು ಈ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಹ ಪ್ರಕರಣದ ಕುರಿತು ಗಮನ ಹರಿಸಿದ್ದು, ದುಃಖದ ಘಟನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿ ಏಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದನ್ನು ಅರಿಯುವಂತೆ ಆದೇಶಿಸಿದ್ದಾರೆ.
ವಿಚಾರಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಶಾಲೆಯ ನಿರ್ದೇಶಕರು ಹಾಗೂ ಪ್ರಾಂಶುಪಾಲರನ್ನು ಬಂಧಿಸುತ್ತೇವೆ. ಸಂತ್ರಸ್ತನ ತಂದೆಯ ಹೇಳಿಕೆಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತನ ತಂದೆ ಬ್ರಿಕ್ ರಾಜ್ ತಿವಾರಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿದ ಅವರು, ಚಡ್ಡಿ ಧರಿಸಿ ವಿದ್ಯಾರ್ಥಿ ಶಾಲೆಗೆ ಹಾಜರಾಗಿದ್ದಾನೆ. ಈ ಕುರಿತು ವಿದ್ಯಾರ್ಥಿಯ ವಿರುದ್ಧ ಶಿಕ್ಷಕ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ನಂತರ ಪ್ರಾಂಶುಪಲರ ಆದೇಶದ ಮೇರೆಗೆ ಶಿಕ್ಷಕ ವಿದ್ಯಾರ್ಥಿಯ ಕೈಗಳನ್ನು ಟೈಯಿಂದ ಕಟ್ಟಿ, ಹಲವು ಬಾರಿ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ.
ಶಿಕ್ಷಕ ಇಡೀ ತರಗತಿಯ ಮುಂದೆ ಮಗನ ಬಟ್ಟೆಯನ್ನು ಬಿಚ್ಚಿಸಿ ನಿಲ್ಲಿಸುವ ಮೂಲಕ ಅವಮಾನಿಸಿದ್ದಾರೆ ಎಂದು ದೂರಿದ್ದಾರೆ. ವಿದ್ಯಾರ್ಥಿಯ ತಾಯಿ ಪ್ರತಿಕ್ರಿಯಿಸಿ, ಘಟನೆ ನಡೆದ ನಂತರ ವಿದ್ಯಾರ್ಥಿ ಶಾಲೆಗೆ ಹೋಗುತ್ತಿರಲಿಲ್ಲ. ಅಲ್ಲದೆ, ಊಟವನ್ನು ಸಹ ಮಾಡುತ್ತಿರಲಿಲ್ಲ ಎಂದು ದೂರಿದ್ದಾರೆ.