ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾದರೂ ಕೂಡ ಸೂಕ್ತವಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಉಸ್ತುವಾರಿ ಜಿಲ್ಲೆಯಲ್ಲೇ ನೂರಾರು ವಿದ್ಯಾರ್ಥಿಗಳು ಕಾಲ್ನಡಿಗೆಯ ಮೂಲಕ ಶಾಲೆಗೆ ತೆರಳುವ ಪರಿಸ್ಥಿತಿ ಇದೆ.
ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆ ಯಾದಗಿರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ, ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ಅಷ್ಟು ದೂರ ನಡೆಯಬೇಕಾದರೂ ಸಹ ವಿದ್ಯಾರ್ಥಿಗಳಲ್ಲಿ ಕೊಂಚವೂ ಓದುವ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಓದಿನಲ್ಲಿ ಗುರಿ ಹೊಂದಿರುವ ವಿದ್ಯಾರ್ಥಿಗಳು ಹುಮ್ಮಸ್ಸಿನಲ್ಲೇ ನಿತ್ಯ ನಡೆದು ಶಾಲೆಯತ್ತ ಸಾಗುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್
ಯಾದಗಿರಿ ಮಾತ್ರವಲ್ಲದೇ ಇತ್ತ ದಾವಣಗೆರೆ ಜಿಲ್ಲೆಯಲ್ಲೂ ಇದೇ ಪರಸ್ಥಿತಿ. ಚನ್ನಗಿರಿ ತಾಲೂಕಿನ 15ಕ್ಕೂ ಅಧಿಕ ಹಳ್ಳಿಗಳಿಗೆ ಇನ್ನೂ ಸಹ ಬಸ್ಗಳ ವ್ಯವಸ್ಥೆಯೇ ಇಲ್ಲ. ಸಂತೆಬೆನ್ನೂರು ಹೊರವಲಯದಲ್ಲಿರುವ ಕಾಲೇಜ್ಗೆ ತೆರಳಲು ವಿದ್ಯಾರ್ಥಿಗಳು ನಿತ್ಯ ಎರಡು ಕಿಲೋ ಮೀಟರ್ ನಡೆಯಲೇಬೇಕು. ನಲ್ಕುದುರೆ, ವೆಂಕಟೇಶ್ವರ ಕ್ಯಾಂಪ್, ಕೋಗಲುರು ಸೇರಿ 15ಕ್ಕೂ ಅಧಿಕ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಡೀಸೆಲ್ ಬೆಲೆ ದುಬಾರಿ ಆಗಿರುವುದರಿಂದ ಖಾಸಗಿ ಬಸ್, ಆಟೋದವರು ದುಪ್ಪಟ್ಟು ಹಣ ಪೀಕುತ್ತಿದ್ದಾರೆ. ಇದರಿಂದಾಗಿ ಅವರಿಗೆ ಹಣ ನೀಡುವ ಬದಲು ವಿದ್ಯಾರ್ಥಿಗಳೇ ನಡೆದುಕೊಂಡು ಹೋಗುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕಾಗಿದೆ. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಜೆಡಿಎಸ್ ಮುಂದೆ ಮಂಡಿಯೂರಲು ಕಾಂಗ್ರೆಸ್ ಸಜ್ಜಾಗಿದ್ಯಾ?