ಹಾಸನ: ನಗರದ ಹೊರವಲಯದ ಮಣಚನಹಳ್ಳಿ ಬಳಿ ಶನಿವಾರ ಸಂಜೆ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿದ್ದ ಯುವತಿ ಇಂದು ಮದುವೆಯಾಗಿ ಪ್ರತ್ಯಕ್ಷವಾಗಿದ್ದಾಳೆ.
ಪೂಜಾ ಮತ್ತು ಅಭಿಲಾಷ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಅಭಿಲಾಷ್ ತನ್ನ ಸ್ನೇಹಿತರ ಜೊತೆ ಸೇರಿ ಪೂಜಾಳನ್ನು ಮದುವೆಯಾಗುವುದಕ್ಕಾಗಿಯೇ ಅಪಹರಣ ಮಾಡಿದ್ದಾನೆ ಎಂಬ ಮಾತು ಕೇಳಿಬರುತ್ತಿತ್ತು.
ಆದ್ರೆ ಅಭಿಲಾಷ್ ಮತ್ತು ಪೂಜಾ ಧರ್ಮಸ್ಥಳಕ್ಕೆ ಹೋಗಿ ಮದುವೆಯಾಗಿದ್ದಾರೆ. ಇಂದು ಪೂಜಾ ಪತಿಯ ಜೊತೆ ಅವರ ಮನೆಗೆ ಹೋಗಿದ್ದಾರೆ. ಮದುವೆಗೆ ಮನೆಯವರ ವಿರೋಧ ಇದ್ದ ಕಾರಣ ಈ ಜೋಡಿ ಅಪಹರಣದ ನಾಟಕವಾಡಿತ್ತು.
ನಡೆದಿದ್ದೇನು?
ಹಾಸನದ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ಓದುತ್ತಿರುವ ಮಣಚನಹಳ್ಳಿ ಗ್ರಾಮದ ಪೂಜಾ ಎಂಬ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಪೂಜಾ ಶನಿವಾರ ಸಂಜೆ ಕಾಲೇಜು ಮುಗಿಸಿ ತನ್ನ ಬಾವನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಬಲವಂತವಾಗಿ ಪೂಜಾಳನ್ನು ಕರೆದುಕೊಂಡು ಪರಾರಿಯಾಗಿದ್ದರು. ಪ್ರಕರಣದ ಹಿಂದೆ ಅದೇ ಗ್ರಾಮದ ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಲಾಷ್ ಎಂಬಾತನ ಕೈವಾಡ ಇದೆ ಎಂದು ಶಂಕಿಸಲಾಗಿತ್ತು. ಇದನ್ನು ಓದಿ: ಬಾವನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳಿಂದ ವಿದ್ಯಾರ್ಥಿನಿಯ ಅಪಹರಣ!
ಈ ಸಂಬಂಧ ಪೆನ್ಷನ್ ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಾಗಿತ್ತು.