ಶಿವಮೊಗ್ಗ: ಕಿರು ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಮೇರಿ ಇಮ್ಯಾಕ್ಯುಲೇಟ್ ಶಾಲೆಯಲ್ಲಿ ನಡೆದಿದೆ.
ಶಿಕಾರಿಪುರ ಮೂಲದ ಕಾವ್ಯ (15) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೃತ ಕಾವ್ಯ 4ನೇ ತರಗತಿಯಿಂದ ಇದೇ ಶಾಲೆ ಹಾಗೂ ಶಾಲೆಯ ಹಾಸ್ಟೆಲ್ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು. ಓದಿನಲ್ಲಿ ಬುದ್ಧಿವಂತೆ ಸಹ ಇದ್ದಳು.
ಕಳೆದ ತಿಂಗಳು ನಡೆದ ಪರೀಕ್ಷೆಯಲ್ಲಿ ಕಾವ್ಯ ಕನ್ನಡ ವಿಷಯದಲ್ಲಿ ಕಡಿಮೆ ಅಂಕ ಪಡೆದುಕೊಂಡಿದ್ದಳು. ಈ ಬಗ್ಗೆ ಶಿಕ್ಷಕರು ಯಾಕೆ ಕಡಿಮೆ ಅಂಕ ಪಡೆದಿದ್ದೀಯಾ ಎಂದಿದ್ದರು. ಇದೇ ವಿಷಯವಾಗಿ ಈಕೆಯ ತಾಯಿ ಸಹ ಯಾಕೆ ಕಡಿಮೆ ಅಂಕ ಬಂದಿದೆ, ಓದಿರಲಿಲ್ಲವಾ ಎಂದು ಕೇಳಿದ್ದರು. ಹೀಗಾಗಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ.
ಹಾಸ್ಟೆಲ್ನ ಸ್ಟೋರೂಮಿನಲ್ಲಿ ಸೀರೆಯಿಂದ ಕಾವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಕೋಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕಾವ್ಯ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.