ಧಾರವಾಡ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ (Muttiah Muralitharan) ಈಗ ಧಾರವಾಡದಲ್ಲಿ (Dharwad) ತಮ್ಮದೇ ತಂಪು ಪಾನೀಯ ಕೈಗಾರಿಕೆ ಆರಂಭಿಸುವುದಕ್ಕೆ ಮುಂದಾಗಿರುವುದು ಎಲ್ಲರಿಗೆ ಗೊತ್ತಿರುವ ವಿಷಯ. ಅದಕ್ಕಾಗಿ ಧಾರವಾಡ ತಾಲೂಕಿನ ಬೇಲೂರು ಬಳಿಯ ಕೈಗಾರಿಕಾ ಜಮೀನನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದೆ. ಆದರೆ ಮುರಳೀಧರನ್ ಇಲ್ಲಿ ಕೈಗಾರಿಕೆ ಆರಂಭಿಸುವುದಕ್ಕೆ ಹೊಸ ಸವಾಲೊಂದು ಎದುರಾಗಿದೆ.
ಕ್ರಿಕೆಟ್ ಸ್ಪಿನ್ ಮಾಂತ್ರಿಕ ಎಂದೇ ಹೆಸರು ಪಡೆದಿರುವ ಶ್ರೀಲಂಕಾ (Srilanka) ಕ್ರಿಕೆಟ್ ನಿವೃತ್ತ ಆಟಗಾರ ಮುತ್ತಯ್ಯ ಮುರಳೀಧರನ್, ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ತಂಪು ಪಾನೀಯ ಕಂಪನಿ ಆರಂಭಕ್ಕೆ ಮುಂದಾಗಿದ್ದಾರೆ. ಈಗ ಇದಕ್ಕೆ ರಾಜ್ಯದ ಚಿತ್ರನಟ ಸುರೇಶ್ ಹೆಬ್ಳೀಕರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮುರಳೀಧರನ್ ಈಗಾಗಲೇ ಈ ಕಂಪನಿ ಆರಂಭಕ್ಕೆ 900 ಕೋಟಿ ಹಣ ಹೂಡಲಿದ್ದಾರೆ. ಅಲ್ಲದೇ ಸರ್ಕಾರ ಇವರಿಗೆ ಜಮೀನನ್ನ ಕೂಡಾ ಗುರುತಿಸಿ ಕೊಟ್ಟಿದೆ. ಆದರೆ ಈ ಕಂಪನಿಗೆ ಪ್ರತಿ ದಿನ 20 ಲಕ್ಷ ಲೀಟರ್ ನೀರು ಪೂರೈಕೆ ಮಾಡಬೇಕಿದೆ. ಮೊದಲೇ ಹುಬ್ಬಳ್ಳಿ, ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ (Drinking Water Problem) ಇದೆ. ಜನತೆಗೆ ಸಕಾಲಕ್ಕೆ ಕುಡಿಯುವ ನೀರು ನೀಡಲಾಗುತ್ತಿಲ್ಲ. ಹೀಗಿರುವಾಗ ಈ ಕಂಪನಿಗೆ ಪ್ರತಿದಿನ 20 ಲಕ್ಷ ಲೀಟರ್ ನೀರು ಪೂರೈಕೆ ಮಾಡುವುದರಿಂದ ಅವಳಿನಗರದ ಜನತೆ ನೀರಿಗಾಗಿ ಪರಿತಪಿಸುವಂತಾಗುತ್ತದೆ. ಈ ಸಂಬಂಧ ಕೈಗಾರಿಕಾ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಪರಿಸರವಾದಿ ಹಾಗೂ ಹಿರಿಯ ನಟ ಸುರೇಶ್ ಹೆಬ್ಳೀಕರ್ (Suresh Heblikar) ತಿಳಿಸಿದ್ದಾರೆ.
ಕಂಪನಿಗೆ ಒಟ್ಟು ಮೂರು ಹಂತದಲ್ಲಿ ಮುರಳೀಧರನ್ ಹಣ ಹೂಡಲಿದ್ದಾರೆ. ಅಲ್ಲದೇ ಇದರಿಂದ ಈ ಭಾಗದಲ್ಲಿ ಉದ್ಯೋಗ ಕೂಡಾ ಸೃಷ್ಟಿಯಾಗಲಿವೆ. ಆದರೆ ಹೆಬ್ಳೀಕರ್ ಪ್ರಕಾರ ಉದ್ಯೋಗ ಸೃಷ್ಟಿ ಮಾಡುವುದಕ್ಕೆ, ಕೈಗಾರಿಕೆಗಳಿಗೆ ವಿರೋಧ ಮಾಡಲ್ಲ ಅಂತಾರೆ. ಸರ್ಕಾರ ಈ ಕಂಪನಿಗೆ ನೀರು ಕೊಟ್ಟರೆ ಜನರಿಗೆ ನೀರಿನ ಸಮಸ್ಯೆ ಆಗಲಿದೆ ಎಂದು ಹೆಬ್ಳೀಕರ್ ಅಭಿಪ್ರಾಯ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಮುರಳೀಧರನ್ ಕೈಗಾರಿಕೆ ಆರಂಭಿಸುತ್ತಿರುವ ವಿಷಯ ಗೊತ್ತಾಗಿದೆ. ಅಂತಹ ಕೈಗಾರಿಕೆಗಳನ್ನು ನಾವು ಸ್ವಾಗತಿಸಬೇಕಾಗುತ್ತದೆ. ಯಾರು ಇದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಲಾಗುವುದು ಅಂತ ತಿಳಿಸಿದ್ದಾರೆ.
ಒಟ್ಟಾರೆ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಆರಂಭಿಸಲು ಉದ್ದೇಶಿಸಿರುವ ಈ ಕಂಪನಿಗೆ ಇದೀಗ ಹೊಸ ಸವಾಲು ಎದುರಾಗಿದ್ದು, ಸರ್ಕಾರ ಇದನ್ನು ಯಾವ ರೀತಿ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Web Stories