ಬೆಂಗಳೂರು: ರಿಕವರಿ ಹೆಸರಲ್ಲಿ ಪೊಲೀಸರು ಗಿರವಿ ಅಂಗಡಿ, ಚಿನ್ನದ ಅಂಗಡಿ ಮಾಲೀಕರಿಗೆ ಕಿರುಕುಳ ಕೊಟ್ಟರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಪರಮೇಶ್ವರ್ (G Parameshwara) ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿಯಮ 72ರ ಅಡಿ ಜೆಡಿಎಸ್ನ ಶರವಣ ವಿಷಯ ಪ್ರಸ್ತಾಪ ಮಾಡಿದರು. ಬೆಂಗಳೂರು ಮತ್ತು ರಾಜ್ಯದಲ್ಲಿ ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು (Police officers) ರಿಕವರಿ ನೆಪದಲ್ಲಿ ಗಿರಿವಿ ಮತ್ತು ಚಿನ್ನದ ಅಂಗಡಿ ಮಾಲೀಕರಿಗೆ ಕಿರುಕುಳ ಕೊಡುತ್ತಿದ್ದಾರೆ. ಪೊಲೀಸರು ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಪೊಲೀಸರು ಸಮವಸ್ತ್ರ ಹಾಕಿಕೊಂಡು ರಿಕವರಿ ಹೋಗುತ್ತಿಲ್ಲ. ಅವರೇನು ಪೊಲೀಸರಾ? ರೌಡಿಗಳಾ?ರಿಕವರಿ ಮಾಡೋವಾಗ ವೀಡಿಯೋ ಮಾಡಬೇಕು ಆದರೆ ಯಾರು ವೀಡಿಯೋ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು.
ಮಾಲೀಕರನ್ನು ಪೊಲೀಸರು ಬೆದರಿಸುತ್ತಿದ್ದಾರೆ. ಕುತ್ತಿಗೆ ಪಟ್ಟಿ ಹಿಡಿದು ಕಾರ್ಗೆ ಹಾಕುತ್ತಾರೆ. ಬಾಣಸವಾಡಿ, ರಾಮಮೂರ್ತಿ ನಗದದಲ್ಲಿ ಇಂತಹ ಕೇಸ್ ಆಗುತ್ತಿದೆ. ಯಾವುದೇ ಮಾಹಿತಿ ನೀಡದೇ ಪೊಲೀಸರು ದೌರ್ಜನ್ಯ ಮಾಡುತ್ತಾರೆ. ಪೊಲೀಸರು ಅಂಗಡಿ ಬಂದ ಕೂಡಲೆ ಸಿಸಿ ಕ್ಯಾಮೆರಾಗಳನ್ನು ಆಫ್ ಮಾಡಿಸುತ್ತಾರೆ. ನನಗೆ ಸ್ವಲ್ಪ ಚಿನ್ನ ಕೊಡು ಕೇಸ್ ಮುಗಿಸುತ್ತೇನೆ ಎನ್ನುತ್ತಾರೆ ಎಂದರು. ಇದನ್ನೂ ಓದಿ: PTCL ಕಾಯ್ದೆ ತಿದ್ದುಪಡಿಗೆ ಬದ್ಧ; ದಲಿತರಿಗೆ ಭೂಮಿ ಪರಭಾರೆ ಆಗ್ಲೇಬೇಕು ಅನ್ನೋದ್ರಲ್ಲಿ ರಾಜಿ ಇಲ್ಲ: ಸಿದ್ದರಾಮಯ್ಯ
ಎಸ್ಒಪಿಯಲ್ಲಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ನೋಟಿಸ್ ಕೊಡಬೇಕು ಅಂತ ಇದೆ. ಆದರೆ ಪೊಲೀಸರು ನೋಟಿಸ್ ತೋರಿಸೋದಿಲ್ಲ. ಜುವೆಲ್ಲರಿ ಎಕ್ಸಿಬಿಷನ್ಗೆ ಬರಬೇಕಾದರೆ ಏರ್ಪೋರ್ಟ್ನಿಂದಲೇ ಪೊಲೀಸರು ತಪಾಸಣೆ ಕಿರುಕುಳ ಕೊಡುತ್ತಾರೆ. ಒಂದೇ ಕಳ್ಳನನ್ನ 10 ಅಂಗಡಿಗೆ ಕರೆದುಕೊಂಡು ಹೋಗಿ ಪೊಲೀಸರು ಇದೇ ಅಂಗಡಿ ತೋರಿಸು ಎಂದು ಹೇಳುತ್ತಾರೆ. ಅರೆಸ್ಟ್ ಮಾಡಿದರೂ ಮಾಹಿತಿ ಕೊಡಲ್ಲ. ಎಸ್ಒಪಿಯನ್ನು (SOP) ಪೊಲೀಸರು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಇಂತಹ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಇದಕ್ಕೆ ಉತ್ತರ ನೀಡಿದ ಸಚಿವ ಪರಮೇಶ್ವರ್, ಪೊಲೀಸರು ರಿಕವರಿ ಮಾಡಲು ನಿಯಮ ಇದೆ. ನಿಯಮ ಮೀರಿ ಅವರು ಕೆಲಸ ಮಾಡಲು ಆಗಲ್ಲ. 18 ನಿಯಮಗಳನ್ನು ಪೊಲೀಸರು ಪಾಲನೆ ಮಾಡಬೇಕು. ಪ್ರೊಸೀಜರ್ ಪ್ರಕಾರ ರಿಕವರಿ ಮಾಡದೇ ಇದ್ದರೆ ಅಂತಹ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: NDA ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ: ಕುಮಾರಸ್ವಾಮಿ
ಪೊಲೀಸರಿಗೆ ಈಗಾಗಲೇ ಎಸ್ಒಪಿ ನೀಡಲಾಗಿದೆ. ಕಡ್ಡಾಯವಾಗಿ ವೀಡಿಯೋ ಮಾಡಲು ಸೂಚನೆ ನೀಡುತ್ತೇನೆ. ರಿಕವರಿ ಮಾಡಿದ ದಿನವೇ ಪಂಚನಾಮೆ ಮಾಡಬೇಕು. ಪೊಲೀಸರು ಕಡ್ಡಾಯವಾಗಿ ಎಸ್ಒಪಿ ಪಾಲನೆ ಮಾಡಲು ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.
Web Stories