ರಾಮನಗರ: ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ವೇಳೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು, ತಪ್ಪಿಸಿಕೊಳ್ಳಲು ಹೋಗಿ ಬಾಲಕಿ ಕೈ ಮುರಿದುಕೊಂಡಿದ್ದಾಳೆ.
ನಗರದ 30ನೇ ವಾರ್ಡಿನ ಐಜೂರಿನ ವಾಟರ್ ಟ್ಯಾಂಕ್ ಬಳಿ ಭಾನುವಾರ ಗಿರೀಶ್ ಪುತ್ರಿ ಪ್ರೀತಿ ಆರ್.ಜಿ(11) ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಸಮಯದಲ್ಲಿ 10 ಕ್ಕೂ ಹೆಚ್ಚು ಬೀದಿ ನಾಯಿಗಳು ಬಾಲಕಿಯನ್ನು ಸುತ್ತುವರೆದಿವೆ. ಈ ವೇಳೆ ಗಾಬರಿಗೊಂಡ ಬಾಲಕಿ ಓಡಲು ಮುಂದಾದಾಗ ಬಿದ್ದಿದ್ದು, ಬಿದ್ದ ರಭಸಕ್ಕೆ ಕೈ ಮೂಳೆ ಮುರಿದಿದೆ.
ಬೀದಿ ನಾಯಿಗಳ ದಾಳಿಯ ನಂತರ ಸ್ಥಳದಲ್ಲಿದ್ದ ಸಾರ್ವಜಿನಿಕರು ಬಾಲಕಿಯ ಪೋಷಕರಿಗೆ ವಿಚಾರ ತಿಳಿಸಿದ್ದು, ನಂತರ ಬಾಲಕಿಯನ್ನು ಹತ್ತಿರದ ನಾರಾಯಣ ಅಸ್ಪತ್ರೆಗೆ ಕರೆದೋಯ್ದಿದ್ದಾರೆ. ಕೈಗೆ ಹೆಚ್ಚು ಪೆಟ್ಟು ಬಿದ್ದಿದ್ದ ಕಾರಣ ಕೈ ಮೂಳೆ ಮುರಿದಿದೆ ಎಂದು ವೈದ್ಯರು ವೈದ್ಯರು ತಿಳಿಸಿದ್ದಾರೆ.
ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಮಗೆ ಈ ರೀತಿ ಅನಾಹುತ ಸಂಭವಿಸಿದರೆ, ಆಸ್ಪತ್ರೆ ಖರ್ಚು ಭರಿಸುವವರ್ಯಾರು ಎಂದು ಪೋಷಕರು ಗೋಳಿಡುತ್ತಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.