ಬೆಂಗಳೂರು: ಸಿಗರೇಟು ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ವ್ಯಾಪಾರಿ ಮೇಲೆ ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ಉತ್ತರ ಹಳ್ಳಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಾಪಾರಿಯನ್ನು ಅಂಜಧ ಚ್ಹಾನ್ ಎಂದು ಗುರುತಿಸಲಾಗಿದೆ. ಅಂಜದ್ ಮತ್ತು ಆತನ ಕುಟುಂಬ ಉತ್ತರಹಳ್ಳಿ ಪೆಟ್ರೋಲ್ ಬಂಕ್ ಸಮೀಪದ ಬಾರ್ ಬಳಿ ಅಗರಬತ್ತಿ ವ್ಯಾಪಾರ ನಡೆಸುತ್ತಿದ್ದಾರೆ. ಈ ವೇಳೆ ಕಂಠ ಪೂರ್ತಿ ಕುಡಿದು ಸ್ಥಳಕ್ಕೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಸಿಗರೇಟು ತರಲು ಅಂಜದ್ ಅವರಿಗೆ ಹೇಳಿದ್ದಾನೆ. ಆದರೆ ಅಂಜದ್ ವ್ಯಾಪಾರದಲ್ಲಿ ನಿರತರಾಗಿದ್ದರಿಂದ ಅಲ್ಲಿಂದ ಸಿಗರೇಟು ತರಲು ಹೋಗಿಲ್ಲ. ಇದರಿಂದ ಕೆರಳಿದ ಅಪರಿಚಿತ ಅಂಜದ್ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯಿಂದ ಹಲ್ಲೆಗೊಳಗಾಗಿದ್ದ ಅಂಜದ್ರನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಮುಂದೆ ಬಾರದೇ ಇದ್ದಾಗ ಅದೇ ಹಾದಿಯಲ್ಲಿ ಊಟ ಮುಗಿಸಿಕೊಂಡು ಬರುತ್ತಿದ್ದ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಕಾರಿನಲ್ಲೇ ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪರೀಕ್ಷಿಸಿದ ಆಸ್ಪತ್ರೆ ವೈದ್ಯರು ಆತನಿಗೆ ತೀವ್ರವಾಗಿ ಗಾಯವಾಗಿರುವುದರಿಂದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸುವಂತೆ ಸೂಚನೆ ನೀಡಿದರು. ಹೀಗಾಗಿ ಹಲ್ಲೆಗೊಳಗಾದ ಅಂಜದ್ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ನಗರದ ಸುಬ್ರಮಣ್ಯಪುರ ಪೊಲೀಸ್, ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.