ನಾಗ್ಪುರ: ಭಾರತೀಯರ ಮೂತ್ರ ಪೂರ್ಣ ಪ್ರಮಾಣದಲ್ಲಿ ಸಂಗ್ರಹವಾದರೆ ನಾವು ವಿದೇಶದಿಂದ ರಸಗೊಬ್ಬರ ಆಮದನ್ನು ತರುವ ಅಗತ್ಯವೇ ಇಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಈಗ ಹೇಗೆ ಜೈವಿಕ ತ್ಯಾಜ್ಯಗಳನ್ನು ಬಳಸಿ ಇಂಧನವನ್ನು ಉತ್ಪಾದಿಸಲಾಗುತ್ತದೋ ಅದೇ ರೀತಿಯಾಗಿ ಮಾನವನ ಮೂತ್ರವನ್ನು ಬಳಸಿ ಜೈವಿಕ ಇಂಧನವನ್ನು ತಯಾರಿಸಬಹುದು. ಯೂರಿಯಾ ರಸಗೊಬ್ಬರವನ್ನು ತಯಾರಿಸಬಹುದು ಎಂದು ಸಲಹೆ ನೀಡಿದರು.
ನಾನು ವಿಮಾನ ನಿಲ್ದಾಣದಲ್ಲಿ ಮೂತ್ರವನ್ನು ಸಂಗ್ರಹಿಸಬೇಕು ಎಂದು ಹೇಳಿದ್ದೆ. ಆದರೆ ಈ ಮಾತನ್ನು ಯಾರು ಕೇಳಿಸಿಕೊಳ್ಳಲಿಲ್ಲ. ಮೂತ್ರದಲ್ಲಿ ಒಂದು ವಿಶೇಷ ಶಕ್ತಿ ಇದ್ದು ಸಂಗ್ರಹಿಸಿದರೆ ವ್ಯರ್ಥವಾಗುವುದನ್ನು ತಡೆಯಬಹುದು. ದೇಶದಲ್ಲಿರುವ ಅಷ್ಟೂ ಭಾರತೀಯರ ಮೂತ್ರವನ್ನು ಸಂಗ್ರಹಿಸಿದರೆ ನಾವು ಯೂರಿಯಾವನ್ನು ಆಮದು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಕಲ್ಪನೆಗಳು ಅದ್ಭುತವಾಗಿರುತ್ತದೆ. ಆದರೆ ಉಳಿದ ಜನಗಳು ಕಲ್ಪನೆಯ ಜಾರಿಗೆ ಸಹಕಾರ ನೀಡುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಈ ವೇಳೆ ಮಾನವನ ತಲೆಕೂದಲು ಬಳಸಿ ಅಮೈನೊ ಆ್ಯಸಿಡ್ ಉತ್ಪಾದನೆಯ ವಿಚಾರವನ್ನು ಪ್ರಸ್ತಾಪಿಸಿದರು. ನಾಗ್ಪುರದಲ್ಲಿ ಜಾಸ್ತಿ ಪ್ರಮಾಣದಲ್ಲಿ ತಲೆಕೂದಲು ಸಿಗದ ಕಾರಣ ನಾವು ಪ್ರತಿ ತಿಂಗಳು ತಿರುಪತಿಯಿಂದ 5 ಟ್ರಕ್ ತಲೆಕೂದಲನ್ನು ತರುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ:5 ಪೈಸೆಗೆ 1 ಲೀಟರ್ ಕುಡಿಯುವ ನೀರು: ಗಡ್ಕರಿ
ತಲೆಕೂದಲಿನ ಪ್ರಯೋಗ ಯಶಸ್ವಿಯಾದ ಬಳಿಕ ಅಮೈನೊ ಆ್ಯಸಿಡ್ ಉತ್ಪಾದನೆ ಶೇ.25 ರಷ್ಟು ಹೆಚ್ಚಾಗಿದೆ. ನಾವು ಈಗ ವಿದೇಶಕ್ಕೆ ಅಮೈನೊ ಆ್ಯಸಿಡ್ ಮಾರಾಟ ಮಾಡುತ್ತೇವೆ. ದುಬೈ ಸರ್ಕಾರ 180 ಕಂಟೈನರ್ ಬಯೋ ಗೊಬ್ಬರಕ್ಕೆ ಆರ್ಡರ್ ಮಾಡಿದೆ ಎಂದು ತಿಳಿಸಿದರು.
ಈ ಹಿಂದೆ ಗಡ್ಕರಿ ದೆಹಲಿಯ ನಿವಾಸದಲ್ಲಿ ಗಿಡಗಳಿಗೆ ಹಾಕಲು ತಮ್ಮ ಮೂತ್ರವನ್ನು ತೆಗೆದು ಇರಿಸುತ್ತಿದ್ದೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv