ವಿಜಯಪುರ: ಅಕ್ರಮ ಮರಳು ಗಣಿಕಾರಿಕೆ ಪ್ರಶ್ನಿಸಲು ಹೋದ ಪಿಎಸ್ ಐ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಭೀಮಾತೀರದ ಗಡಿ ಗ್ರಾಮ ದಸೂರು ಬಳಿ ನಡೆದಿದೆ.
ಶುಕ್ರವಾರ ಬೆಳಗಿನ ಜಾವ 2 ರಿಂದ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಹಾರಾಷ್ಟ್ರದ ಗಡಿ ಗ್ರಾಮದ ಅಕ್ರಮ ಮರಳು ದಂಧೆಕೋರರಿಂದ ಕೃತ್ಯ ನಡೆದಿದೆ.
ಅಕ್ರಮವನ್ನು ಮೊದಲು ದಸೂರು ಗ್ರಾಮಸ್ಥರು ತಡೆಯಲು ಹೋಗಿದ್ದಾರೆ ಆಗ ಅಕ್ರಮ ಮರಳು ದಂಧೆ ಕೋರರು ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗ್ರಾಮಸ್ಥರು ಚೆಡಚಣ ಪಿಎಸ್ಐ ಗೋಪಾಲ ಹಳ್ಳುರಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಅಕ್ರಮ ಮರಳು ದಂಧೆಕೋರರು ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಪೊಲೀಸರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಘಟನೆಯಲ್ಲಿ ಪಿಎಸ್ಐ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೈಕ್ ಜಖಂಗೊಂಡಿದೆ. ಇನ್ನು ಈ ಘಟನೆ ನಡೆದ ನಂತರ ಇದುವರೆಗೂ ಪೊಲೀಸರು ಘಟನಾ ಸ್ಥಳಕ್ಕೆ ಬಂದಿಲ್ಲ ಎಂದು ದಸೂರು ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.