-ಇಟ್ಟಿಗೆ, ರೇಲಿಂಗ್ ಸಹ ಕದ್ದರು
ನವದೆಹಲಿ: ದೇಶದ ರಾಜಾಧಾನಿಯಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಿದ್ದ ಮೇಲ್ಸೇತುವೆ ಕಳ್ಳತನವಾಗಿದೆ. ಸೌಥ್ ಸೆಂಟ್ರಲ್ ದೆಹಲಿಯಲ್ಲಿ ಜವಾಹರ್ ಲಾಲ್ ಸ್ಟೇಡಿಯಂಗೆ ಹೋಗಲು ಪಾದಚಾರಿಗಳಿಗಾಗಿ 2010ರಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಕೆಲವೇ ತಿಂಗಳಲ್ಲಿ ಸೇತುವೆಗೆ ಅಳವಡಿಸಿದ್ದ ವಸ್ತುಗಳನ್ನು ಕದಿಯಲು ಜನರು ಪ್ರಾರಂಭಿಸಿದ್ದರು.
ಸೇತುವೆ ಉದ್ಘಾಟನೆಯಾದಾಗ ಎರಡು ಬದಿಯಲ್ಲಿ ಎಲಿವೇಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲಿವೇಟರ್ ಬಳಸುವ ಜೊತೆಗೆ ಕೆಲವರು ಅಲ್ಲಿಯ ಸ್ವಿಚ್ಛ್, ಲೈಟ್ ಗಳನ್ನು ಕದಿಯಲು ಆರಂಭಿಸಿದ್ದರು. ವಿದ್ಯುತ್ ಉಪಕರಣಗಳ ಕಳ್ಳತನದ ಬಳಿಕ ಎಲಿವೇಟರ್ ಸೇವೆ ಸ್ಥಗಿತಗೊಂಡಿತ್ತು. ಎರಡು ವರ್ಷಗಳ ಹಿಂದೆ ಮೇಲ್ಸೇತುವೆ ಮೇಲಿನ ಸಂಚಾರವನ್ನು ಪಿಡಬ್ಲ್ಯೂಡಿ ಇಲಾಖೆ ಬಂದ್ ಮಾಡಿದೆ. ಕಳೆದ ಎರಡು ವರ್ಷಗಳಿಂದ ಸೇತುವೆ ಅಕ್ರಮ ಚಟುವಟಿಕೆಗೆ ಮತ್ತು ಕಿಡಿಗೇಡಿಗಳಿಗೆ ಆಶ್ರಯತಾಣವಾಗಿ ಬದಲಾಗಿದೆ.
ಮೇಲ್ಸುತವೆ ಸಂಚಾರ ಬಂದ್ ಆದಾಗಿನಿಂದ ಅಲ್ಲಿಯ ಇಟ್ಟಿಗೆ, ಕಬ್ಬಿಣದ ರಾಡುಗಳು, ಮೇಲೆ ಹತ್ತಲು ಸಹಾಯಕ್ಕೆ ಅಳವಡಿಸಿದ್ದ ಲೋಹದ ಪೈಪುಗಳು ಸೇರಿದಂತೆ ಇನ್ನಿತರ ವಸ್ತುಗಳ ಕಳ್ಳತನವಾಗಿವೆ. ಸದ್ಯ ಸೇತುವೆಯ ಬಹುತೇಕ ವಸ್ತುಗಳು ಕಳ್ಳತನವಾಗಿವೆ. ಇಲ್ಲೊಂದು ಸೇತುವೆ ಇತ್ತು ಎಂಬ ಕುರುಹು ಮಾತ್ರ ಉಳಿದುಕೊಂಡಿದೆ. ಎಷ್ಟು ಸಾಧ್ಯವಾಗುತ್ತೋ ಅಷ್ಟನ್ನು ಸೇತುವೆಯಿಂದ ಕಳ್ಳತನ ಮಾಡಲಾಗಿದೆ. ಇದೀಗ ಬೃಹತ್ ಗಾತ್ರದ ಕಬ್ಬಿಣದ ಸರಳು, ಪೈಪುಗಳು ಉಳಿದುಕೊಂಡಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರಿ ಅಧಿಕಾರಿಯೊಬ್ಬರು, ಸೇತುವೆಯನ್ನು ವಾರಕ್ಕೆ ಸುಮಾರು 10 ಸಾವಿರ ಜನರು ಬಳಸುತ್ತಿದ್ದರು. ಎಲಿವೇಟರ್ ಕೇವಲ ಎರಡು ತಿಂಗಳಲ್ಲಿಯೇ ಬಂದ್ ಆಯ್ತು. ಮುಖ್ಯ ರಸ್ತೆ ಇರೋದರಿಂದ ಇಲ್ಲಿ ಅಪಘಾತ ನಿಯಂತ್ರಣಕ್ಕಾಗಿ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ಬಳಕೆ ನಿಂತಾಗಿನಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಆಸ್ತಿ ಕಳ್ಳತನವಾಗದಂತೆ ಪೊಲೀಸರು ನೋಡಿಕೊಳ್ಳಬೇಕಿತ್ತು. ಆದರೆ ಪೊಲೀಸರು ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬ್ರಿಡ್ಜ್ ಗೆ ಅಳವಡಿಸಲಾಗಿದ್ದ ವಸ್ತುಗಳು ಕಳ್ಳತನವಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2010ರಲ್ಲಿ ಉದ್ಘಾಟಿಸಲಾಗಿದ್ದ ಸೇತುವೆಯ ವಸ್ತುಗಳ ಕಳ್ಳತನದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳುತ್ತಾರೆ. ಮೇಲ್ಸೇತುವೆಗೆ ಎರಡು ಬದಿಯಲ್ಲಿ ಲಿಫ್ಟ್ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಮೇಲ್ಭಾಗದಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಎರಡು ಕಡೆ ಸ್ಟೀಲ್ ನಿಂದ ಮಾಡಲ್ಪಟ್ಟ ರೇಲಿಂಗ್ಸ್ ಅಳವಡಿಸಲಾಗಿತ್ತು. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವದರಿಂದ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಈ ಮೇಲ್ಸೇತುವೆ ಮೂಲಕ ಸಾಯಿ ಬಾಬಾ ಮಂದಿರದಿಂದ ಜವಾಹರ್ ಲಾಲ್ ಸ್ಟೇಡಿಯಂಗೆ ನೇರವಾಗಿ ತಲುಪಬಹುದಿತ್ತು.