ಮಗನನ್ನು ಕೊಚ್ಚಿ ಕೊಲೆಗೈದು, ಮೃತದೇಹ ತುಂಡರಿಸಿ ಬಿಸಾಡಿದ ಮಲತಂದೆ

1 Min Read

– ಮೃತದೇಹದ ಭಾಗವನ್ನು ವಿವಿಧ ಸ್ಥಳದಲ್ಲಿ ಎಸೆದ
– ಕೊಲೆಗೈದು ಮಗ ಕಾಣೆಯಾದ ಎಂದು ಕಣ್ಣೀರಿಟ್ಟ

ಲಕ್ನೋ: ಇಷ್ಟವಿಲ್ಲವೆಂದು ಮಲತಂದೆಯೋರ್ವ ಮಗನನ್ನು ಕೊಚ್ಚಿ ಕೊಲೆಗೈದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿ ವಿಕೃತಿ ಮೆರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಹ್ರೇಚ್ ಜಿಲ್ಲೆಯ ಭೈನ್ಸಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನವೆಂಬರ್ 19ರಂದು ಬಾಲಕನ ಕೊಲೆ ನಡೆದಿದ್ದು, ಈಗ ಆರೋಪಿಗಳು ಯಾರು ಎಂದು ಬೆಳಕಿಗೆ ಬಂದಿದೆ. ಸೂರಜ್ ಯಾದವ್(6) ಮೃತ ಬಾಲಕ. ಆತನ ಮಲತಂದೆ ರಾಮ್ ಸಾರ್ವೆ ಯಾದವ್ ಕೊಲೆ ಮಾಡಿದ ಆರೋಪಿ. ಇತ್ತೀಚೆಗೆ ಸೂರಜ್ ತಾಯಿ ಹೀನಾ ಅವರನ್ನು ರಾಮ್ ಮದುವೆ ಆಗಿದ್ದನು. ಮೊದಲು ಎಲ್ಲವೂ ಚೆನ್ನಾಗಿತ್ತು. ಆದರೆ ದಿನಗಳು ಕಳೆಯುತ್ತಿದ್ದಂತೆ ರಾಮ್ ಹಾಗೂ ಆತನ ಸಹೋದರನಿಗೆ ಸೂರಜ್ ಇಷ್ಟವಾಗಲಿಲ್ಲ. ಆದಕ್ಕೆ ಇಬ್ಬರೂ ಸೇರಿಕೊಂಡು ಮುಗ್ದ ಬಾಲಕನ ಜೀವ ತೆಗೆದಿದ್ದಾರೆ.

ನವೆಂಬರ್ 19ರಂದು ರಾಮ್ ಹಾಗೂ ಆತನ ಸಹೋದರ ಸೇರಿಕೊಂಡು ಬಾಲಕನನ್ನು ಕೊಚ್ಚಿ ಅಮಾನುಷವಾಗಿ ಕೊಲೆ ಮಾಡಿದ್ದರು. ಬಳಿಕ ಈ ಬಗ್ಗೆ ಯಾರಿಗೂ ತಿಳಿಯಬಾರದೆಂದು ಬಾಲಕನ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಯಾವುದೇ ಸಾಕ್ಷ್ಯ ಸಿಗಬಾರದೆಂದು ತುಂಡರಿಸಿದ ದೇಹದ ಭಾಗಗಳನ್ನು ಗ್ರಾಮದಿಂದ ದೂರ ತೆಗೆದುಕೊಂಡು ಹೋಗಿದ್ದರು. ನಂತರ ಅವುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬಿಸಾಡಿ ಮನೆಗೆ ಮರಳಿ ಬಂದಿದ್ದರು.

ಈ ಘಟನೆ ಬಳಿಕ ಎಲ್ಲರನ್ನು ನಂಬಿಸಲು ಸೂರಜ್ ಮನೆಬಿಟ್ಟು ಹೋಗಿದ್ದಾನೆ, ಕಾಣೆಯಾಗಿದ್ದಾನೆ ಎಂದು ಕಣ್ಣಿರು ಹಾಕಿದ್ದರು. ಆದರೆ ಇವರ ವರ್ತನೆ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಬಾಲಕ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

ತಾವೇ ಕೊಲೆ ಮಾಡಿರುವುದಾಗಿ ಆರೋಪಿಗಳು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *