ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಬಿಸಿ ಗಾಳಿ, ಸುಡು ಬಿಸಿಲು ಜನರನ್ನು ಹೈರಾಣಾಗಿಸಿದೆ. 45 ಡಿಗ್ರಿಗಿಂತಲೂ ಅಧಿಕ ತಾಪಮಾನ ದಾಖಲಾಗುವ ನಿರೀಕ್ಷೆಗಳಿದ್ದು ಅನಗತ್ಯ ಮನೆಯಿಂದ ಹೊರಬರದಂತೆ ಹವಾಮಾನ ಇಲಾಖೆ ಜನರಿಗೆ ಸಲಹೆ ನೀಡಿದೆ.
ಕಳೆದೊಂದು ವಾರದಿಂದ ದೆಹಲಿಯಲ್ಲಿ ತಾಪಮಾನ ಹೆಚ್ಚುತ್ತಿದ್ದು ಎರಡು ಮಳೆಗಳ ನಡುವೆಯೂ ವಾತಾವರಣದಲ್ಲಿ ಬಿಸಿ ಗಾಳಿ ಹೆಚ್ಚಿದೆ. ಸೋಮವಾರ 45 ಡಿಗ್ರಿಗಿಂತಲೂ ಅಧಿಕ ತಾಪಮಾನ ದಾಖಲಾದ ಹಿನ್ನೆಲೆ ಹಳದಿ ಎಚ್ಚರಿಕೆ ನೀಡಿದ್ದ ಹವಾಮಾನ ಇಲಾಖೆ ಇಂದು ಆರೆಂಜ್ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: ಇಮ್ರಾನ್ ಖಾನ್ರ ಒಂದು ಕೂದಲಿಗೆ ಹಾನಿಯಾದರೂ ನಾನೇ ಆತ್ಮಹತ್ಯಾ ದಾಳಿ ನಡೆಸುತ್ತೇನೆ: ಪಾಕ್ ಶಾಸಕನ ಬೆದರಿಕೆ
ಹರಿಯಾಣ, ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನದ ಕೆಲವು ಭಾಗಗಳಲ್ಲಿ ಜೂನ್ 4 ರಿಂದ ತೀವ್ರ ಶಾಖದ ಅಲೆ ಕಂಡು ಬಂದಿದೆ. 44-47°C ನಡುವಿನ ತಾಪಮಾನವು ಇನ್ನೂ ನಾಲ್ಕು ದಿನಗಳವರೆಗೂ ಮುಂದುವರಿಯಲಿದ್ದು, ಬಿಸಿಲು ಹೆಚ್ಚಾಗಿರಲಿದೆ. ಈ ಹಿನ್ನೆಲೆ ಮನೆಯಿಂದ ಆಚೆ ಬಾರದಂತೆ ಐಎಂಡಿ ಸಲಹೆ ನೀಡಿದೆ. ಇದನ್ನೂ ಓದಿ: ಕಾನ್ಪುರ ಹಿಂಸಾಚಾರ – 40 ದಂಗೆಕೋರರ ಫೋಟೋ ರಿಲೀಸ್, ಇಬ್ಬರು ಅರೆಸ್ಟ್
ಜೂನ್ 10ರ ವೇಳೆಗೆ ಉತ್ತರ ಭಾರತಕ್ಕೆ ಮಾನ್ಸೂನ್ ಮಳೆ ತಲುಪುವ ನಿರೀಕ್ಷೆಗಳಿತ್ತು. ಆದರೆ ಇದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿದೆ ಎಂದು ತಜ್ಞರು ಹೇಳಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಕಾಲ ಮಾನ್ಸೂನ್ ವಿಳಂಬವಾದಲ್ಲಿ ರೆಡ್ ಅಲರ್ಟ್ ಘೋಷಿಸಬೇಕಾದ ಅನಿವಾರ್ಯತೆ ಬರಬಹುದು ಎಂದು ಇದೇ ವೇಳೆ ಕಳವಳ ವ್ಯಕ್ತಪಡಿಸಿದ್ದಾರೆ.