ಗಾಂಧಿನಗರ: ಸರ್ದಾರ್ ವಲ್ಲಭಭಾಯಿ ಅವರ ಏಕತಾ ಪ್ರತಿಮೆಯನ್ನು ಲೋರ್ಕಾಪಣೆಗೊಳಿಸಲು ಆಗಮಿಸುತ್ತಿರುವ ಪ್ರಧಾನಿ ಮೋದಿಗೆ 22 ಗ್ರಾಮಗಳ ಬುಡಕಟ್ಟು ಜನಾಂಗದ ಮುಖಂಡರು ಭಾರೀ ಆಕ್ರೋಶ ವ್ಯಕ್ತಪಡಿಸಿ ಬಹಿಷ್ಕಾರ ಹಾಕಿದ್ದಾರೆ.
ಕೇವಾಡಿಯಾ ಸೇರಿದಂತೆ 22 ಗ್ರಾಮಗಳ ಬುಡಕಟ್ಟು ಜನಾಂಗದ ಮುಖಂಡರು ಪ್ರಧಾನಿ ಮೋದಿಗೆ ಪತ್ರ ಬರೆದು ಪ್ರತಿಮೆ ಹಾಗೂ ಸ್ಮಾರಕ ಅನಾವರಣ ಕಾರ್ಯಕ್ರಮ ನಿಜಕ್ಕೂ ಸಾವಿನ ಸಂಭ್ರಮಾಚರಣೆ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? – ಇಲ್ಲಿದೆ ಪೂರ್ಣ ವಿವರ
ಬಹಿರಂಗ ಪತ್ರದಲ್ಲಿ ಏನಿದೆ?:
ನಿಮ್ಮನ್ನು ನಾವು ಸ್ವಾಗತಿಸುವುದಿಲ್ಲ. ನೀವು ನಮಗೆ ಬೇಡವಾಗಿರುವ ಅತಿಥಿ. ಸರ್ದಾರ್ ಸ್ಮಾರಕ ನಿರ್ಮಾಣಕ್ಕಾಗಿ ಅರಣ್ಯ, ನದಿ, ಜಲಪಾತ, ಭೂಮಿ ಮತ್ತು ಕೃಷಿ ಪ್ರದೇಶಗಳನ್ನು ನಾಶಮಾಡಲಾಗಿದೆ. ನಮ್ಮ ಪೂರ್ವಿಕರ ಕಾಲದಿಂದಲೂ ಇವುಗಳನ್ನೇ ನಂಬಿಕೊಂಡು, ಬದುಕು ಕಟ್ಟಿಕೊಂಡು ಬಂದಿದ್ದೇವೆ. ನಮ್ಮ ಬದುಕನ್ನು ಕಸಿಕೊಂಡು, ಸ್ಮಾರಕ ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಹಾಗೂ ಸ್ಮಾರಕ ಅನಾವರಣ ಕಾರ್ಯಕ್ರಮ ನಿಜಕ್ಕೂ ಸಾವಿನ ಸಂಭ್ರಮಾಚರಣೆ. ಇದು ನಿಮಗೆ ತೋಚಲಿಲ್ಲವೇ ಎಂದು ಬುಡಕಟ್ಟು ಜನಾಂಗದ ಮುಖಂಡರು ಪ್ರಶ್ನಿಸಿದ್ದಾರೆ.
ಗುಜರಾತ್ ನಲ್ಲಿ ಅದೆಷ್ಟೋ ಹಳ್ಳಿಗಳಿಗೆ ಶಾಲೆ, ಆಸ್ಪತ್ರೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳೇ ಸಿಗುತ್ತಿಲ್ಲ. ತೆರಿಗೆ ರೂಪದಲ್ಲಿ ಪಡೆದ ಜನರ ಹಣವನ್ನು ಜನರ ಮೂಲ ಅವಶ್ಯಕತೆ ಒದಗಿಸಲು ಬಳಸಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ಒಂದು ವೇಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿ ಈಗಲೂ ಬದುಕಿರುತ್ತಿದ್ದರೆ ಇಂತಹ ಪ್ರತಿಮೆ ನಿರ್ಮಾಣಕ್ಕೆ ಯಾರದರೂ ಮುಂದಾಗಿದ್ದರೆ ಅವರು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದರು ಎಂದು ಪತ್ರದ ಮೂಲಕ ಕಿಡಿಕಾರಿದ್ದಾರೆ.
ಏಕತಾ ಪ್ರತಿಮೆ ಯೋಜನೆಗೆ ಕಾಂಗ್ರೆಸ್ ಅಷ್ಟೇ ಅಲ್ಲದೆ, ಹಿರಿಯ ಗುಜರಾತ್ ರಾಜಕಾರಣಿ ಶಂಕರ್ ಸಿಂಗ್ ವಘೇಲಾ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಭೂಮಿ, ನೆಲೆ ಕಳೆದುಕೊಂಡ 22 ಗ್ರಾಮಗಳ ಬುಡಕಟ್ಟು ಜನಾಂಗದ ನಾಯಕರು ಕಿಡಿ ಹೊರಹಾಕಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಈ ಯೋಜನೆಯನ್ನು 2010ರಲ್ಲಿ ಘೋಷಣೆ ಮಾಡಿದ್ದರು. 2010ರಲ್ಲೇ ಘೋಷಣೆ ಮಾಡಿದಾಗಲೇ ಈ ಯೋಜನೆಗೆ ಅಲ್ಲಿನ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ವಿಳಂಬವಾಗಿ 2013ರ ಅಕ್ಟೋಬರ್ ನಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv